ಚಾಮರಾಜನಗರ: ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇಂದು ಮಧ್ಯಾಹ್ನ 1 ಗಂಟೆಗೆ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಚಾಲನೆ ನೀಡಲಿದ್ದಾರೆ.
ರಾಜ್ಯದ ನಾಲ್ಕು ಕಡೆಗಳಿಂದ ಪ್ರಚಾರ ರಥಗಳು ಹೊರಡಲಿದ್ದು, ಮಹದೇಶ್ವರ ಬೆಟ್ಟದಿಂದ ಆರಂಭವಾಗಲಿದೆ. ಉಳಿದ ಮೂರು ಕಡೆಗಳಿಂದ ಗುರುವಾರ ಯಾತ್ರೆ ಶುರುವಾಗಲಿದೆ.
ಮೈಸೂರಿಂದ ಹೆಲಿಕಾಪ್ಟರ್ ನಲ್ಲಿ ಮಧ್ಯಾಹ್ನ 12.45ಕ್ಕೆ ಬೆಟ್ಕ್ಕೆ ಬಂದಿಳಿಯಲಿರುವ ನಡ್ಡಾ ಅವರು, ಮಹದೇಶ್ವರ ಸ್ವಾಮಿಯ ದರ್ಶನ ಮಾಡಿ, ಬಳಿಕ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನಡ್ಡಾ ಜೊತೆಗಿರಲಿದ್ದಾರೆ.
ಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವರಾದ ಅರಗ ಜ್ಞಾನೇಂದ್ರ, ವಿ.ಸುನಿಲ್ ಕುಮಾರ್, ಶಾಸಕ ಈಶ್ವರಪ್ಪ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಉದ್ಘಾಟನೆ ಕಾರ್ಯಕ್ರಮದ ನಂತರ, ಜೆ.ಪಿ.ನಡ್ಡಾ ಅವರು ಬೇಡಗಂಪಣ ಹಾಗೂ ಸೋಲಿಗ ಸಮುದಾಯದವರೊಂದಿಗೆ ಸಂವಾದ ನಡೆಸಲಿದ್ದಾರೆ.
ಮಧ್ಯಾಹ್ನದ ನಂತರ ಹನೂರಿನಲ್ಲಿ ನಡೆಯಲಿರುವ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಹನೂರು ಸಮಾವೇಶದಲ್ಲಿ ನಡ್ಡಾ, ಸಿ.ಎಂ ಭಾಗವಹಿಸಲಿದ್ದಾರೆ. ಇಬ್ಬರೂ ಅಲ್ಲಿಂದ ಮೈಸೂರಿಗೆ ವಾಪಸ್ ಆಗಲಿದ್ದಾರೆ.
ಉಳಿದ ಸಚಿವರು ಹಾಗೂ ಮುಖಂಡರು ಸಂಜೆ ಕೊಳ್ಳೇಗಾಲದಲ್ಲಿ ನಡೆಯಲಿರುವ ರೋಡ್ ಶೋ ಮತ್ತು ಸಾಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಗುರುವಾರ ಚಾಮರಾಜನಗರದಲ್ಲಿ ರೋಡ್ ಶೋ ಮತ್ತು ಗುಂಡ್ಲುಪೇಟೆ ಯಲ್ಲಿ ಸಮಾವೇಶ ನಡೆಯಲಿದೆ.