ಚಾಮರಾಜನಗರ: ಹೆಂಡತಿಯನ್ನು ಹೊಡೆದು ಕೊಂದ ಗಂಡನಿಗೆ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ.
ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಠಾಣಾ ವ್ಯಾಪ್ತಿಯ ಯರಿಯೂರು ಗ್ರಾಮದ ರಾಜು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ.
2017ರ ಜುಲೈ ತಿಂಗಳ 14ರಂದು ರಾಜು, ಪತ್ನಿ ಚಿಕ್ಕತಾಯಮ್ಮಳನ್ನು ಕೊಲೆ ಮಾಡಿದ್ದ.
ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಿಯಾ ಎಂದು ಆರೋಪಿಸಿ ಚಿಕ್ಕತಾಯಮ್ಮಳ ಜೊತೆ ಜಗಳವಾಡಿದ್ದ ರಾಜು,ಕೊಡಲಿಯಿಂದ ತಲೆ, ಹಣೆಗೆ ಹಲ್ಲೆ ಮಾಡಿದ್ದಲ್ಲದೇ, ಚಾಕುವಿನಿಂದ ಮರ್ಮಾಂಗಕ್ಕೆ ಇರಿದಿದ್ದ.
ಚಿಕಿತ್ಸೆಗಾಗಿ ಆಕೆಯನ್ನು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಳು.
ತೆರಕಣಾಂಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್ಪೆಕ್ಟರ್ ಕೆ.ವಿ.ಕೃಷ್ಣಪ್ಪ ಅವರು ತನಿಖೆ ಕೈಗೊಂಡು ಗುಂಡ್ಲುಪೇಟೆಯಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ರಾಜು ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.
ಆ ಬಳಿಕ ಪ್ರಕರಣವು ಚಾಮರಾಜನಗರದ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.
ರಾಜು ವಿರುದ್ಧದ ಆರೋಪಗಳು ಸಾಬೀತಾಗಿದ್ದರಿಂದ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್.ಎನ್.ಲೋಕಪ್ಪ ಅವರು ರಾಜುಗೆ ಜೀವಾವಧಿ ಶಿಕ್ಷೆಯ ಜೊತೆಗೆ ₹ ಲಕ್ಷ ದಂಡ ವಿಧಿಸಿದ್ದಾರೆ.
ಪಬ್ಲಿಕ್ ಪ್ರಾಸಿಕ್ಯೂಟರ್ ಉಷಾ ಅವರು ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಿದ್ದರು.