ಕೊಳ್ಳೇಗಾಲ: ಇಲ್ಲಿನ ಮುಡಿಗುಂಡದ ರೇಷ್ಮೆಗೂಡಿನ ಮಾರುಕಟ್ಟೆಗೆ ಬಂದ ರೈತರೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂಬ ವದಂತಿ ಭಾನುವಾರ ಹರಡಿ ಕೆಲ ಹೊತ್ತು ಗೊಂದಲ ಸೃಷ್ಟಿಯಾಯಿತು.
ಮಾರುಕಟ್ಟೆಗೆ ಬಂದಿದ್ದ ಇತರೆ ರೈತರು, ರೀಲರ್ಗಳು ಹಾಗೂ ಮಾಹಿತಿ ತಿಳಿದ ಅಧಿಕಾರಿಗಳೂ ಸ್ವಲ್ಪ ಕಾಲ ಗೊಂದಲದಲ್ಲಿ ಸಿಲುಕಿದರು.
ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಭಾನುವಾರ ಎಂದಿನಂತೆ ವಹಿವಾಟು ನಡೆಯುತ್ತಿತ್ತು.ರಾಮನಗರ ಜಿಲ್ಲೆಯ ಕನಕಪುರದಿಂದ ಬಂದಿದ್ದ ರೈತರೊಬ್ಬರು ಪದೇ ಪದೇ ಕೆಮ್ಮು ಹಾಗೂ ಸೀನುತ್ತಿದ್ದರು.ಇದನ್ನು ಕಂಡು ಅವರ ಪಕ್ಕದಲ್ಲಿದ್ದ ರೈತರು ಹಾಗೂ ರೀಲರ್ಗಳು ಭಯಗೊಂಡರು.
ಇದೇ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು, ಆ ರೈತನಿಗೆ ಕೊರೊನಾ ವೈರಸ್ ಸೋಂಕು ಇದೆ ಎಂಬ ಸುದ್ದಿ ಹಬ್ಬಿಸಿದರು. ಆತಂಕಗೊಂಡ ರೈತರು ಹಾಗೂ ರೀಲರ್ಗಳು ವಹಿವಾಟು ಸ್ಥಗಿತಗೊಳಿಸಿ ಹೊರ ಬಂದರು.
ತಕ್ಷಣವೇ ಮಾರುಕಟ್ಟೆಯ ಅಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಕುನಾಲ್ ಅವರಿಗೆ ಮಾಹಿತಿ ನೀಡಿದರು.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅವರು ಪರಿಶೀಲನೆ ನಡೆಸಿದರು.
‘ಆ ರೈತರ ಗ್ರಾಮದಲ್ಲಿ ಕೋವಿಡ್–19 ಪ್ರಕರಣ ವರದಿಯಾಗಿಲ್ಲ. ಅವರಲ್ಲಿ ರೋಗ ಲಕ್ಷಣಗಳೂ ಇಲ್ಲ. ಕೆಲ ಕಿಡಿಗೇಡಿಗಳು ಇಲ್ಲಸಲ್ಲದ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಅವರ ಜಿಲ್ಲೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದು ಕುನಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾನು ರೈತರೊಂದಿಗೆ ಮಾತನಾಡಿದ್ದೇನೆ. ತಮಗೆ ಯಾವ ರೋಗ ಲಕ್ಷಣ ಇಲ್ಲ ಎಂದು ಅವರು ಹೇಳಿದ್ದಾರೆ. ಹಾಗಿದ್ದರೂ, ನಾವು ಈ ರೈತರ ಬಗ್ಗೆ ಅವರ ಜಿಲ್ಲೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದುಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಂ.ಸಿ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.