ಯಳಂದೂರು: ತಾಲ್ಲೂಕಿನಲ್ಲಿ ಸಂಚರಿಸುವ ನಗುಮಗು ವಾಹನದಲ್ಲಿ ಕೋವಿಡ್-19ನಿಂದ ಮೃತಪಟ್ಟವರ ಶವಗಳನ್ನು ಸಾಗಿಸಲಾಗುತ್ತದೆ. ಇದರಿಂದ ಹೆರಿಗೆಗಾಗಿ ಆಸ್ಪತ್ರೆಗೆ ತೆರಳುವ ಗ್ರಾಮೀಣರು ಬಾಡಿಗೆ ವಾಹನಕ್ಕೆ ಹೆಚ್ಚಿನ ಹಣ ವ್ಯಯಿಸಿ ಆಸ್ಪತ್ರೆಗೆ ತೆರಳಬೇಕಾದ ಸ್ಥಿತಿ ಎದುರಾಗಿದೆ.
ಪಟ್ಟಣದ ಆಸ್ಪತ್ರೆ ಆವರಣದಲ್ಲಿ ಹೆರಿಗೆ ವಾರ್ಡ್ ಇದೆ. ಸಮೀಪದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ. ಈ ನಡುವೆ ನಗು-ಮಗು ವಾಹನವನ್ನು ಶವ ಸಾಗಿಸಲು ಬಳಸಲಾಗುತ್ತದೆ. ಇದರಿಂದ ಸಾರ್ವಜನಿಕರು ಆಸ್ಪತ್ರೆ ಸಿಬ್ಬಂದಿ ಜೊತೆ ಮಾತಿನ ಚಕಮುಖಿ ನಡೆಸುವಂತೆ ಆಗಿದೆ. ನಗು ಮಗು ವಾಹನವನ್ನು ಹೆರಿಗೆಗಾಗಿ ತೆರಳುವವರಿಗೆ ಮಾತ್ರ ಬಳಸಬೇಕು ಎಂದು ಅಗರ ರಾಜು ಆಗ್ರಹಿಸಿದರು.
ಆಸ್ಪತ್ರೆಯಲ್ಲಿ ವಾಹನಗಳ ಕೊರತೆ ಇದೆ. ಹಾಗಾಗಿ, ನಗುಮಗು ವಾಹನ ಬಳಕೆ ಮಾಡಲಾಗುತ್ತದೆ. ಹೊಸ ವಾಹನ ಸದ್ಯದಲ್ಲಿ ಬರುವ ನಿರೀಕ್ಷೆ ಇದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ್ ಹೇಳಿದರು.
ಈ ಬಗ್ಗೆ ಸಚಿವ ಎಸ್.ಸುರೇಶ್ ಕುಮಾರ್ ಮಾತನಾಡಿ, ‘ನಗು ಮಗು ವಾಹನದಲ್ಲಿ ಶವ ಸಾಗಿಸುವುದನ್ನು ಸ್ಥಗಿತಗೊಳಿಸಿ, ಶವ ಸಾಗಿಸಲು ಬೇರೆ ವಾಹನ ಬಳಸುವಂತೆ ತಿಳಿಸಲಾಗುವುದು. ವಾಹನದ ಇದ್ದರೆ ಬೇರೆ ಸಿದ್ಧತೆ ಮಾಡಿಕೊಂಡು, ಉದ್ದೇಶಿತ ವಾಹನಗಳನ್ನು ಆಯಾ ಕಾರ್ಯಕ್ಕೆ ಬಳಸಬೇಕು’ ಎಂದರು.