ಯಳಂದೂರು: ’ಆರನೇ ತರಗತಿಯ ಸಮಾಜವಿಜ್ಞಾನ ಪಠ್ಯದಿಂದ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ವಿಷಯವನ್ನು ತೆಗೆಯಲು ಮುಂದಾಗಿರುವುದು ಖಂಡನೀಯ. ಪಠ್ಯದಿಂದ ಈ ವಿಷಯವನ್ನು ಕೈಬಿಟ್ಟರೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರು ಎಚ್ಚರಿಸಿದರು.
ಯಳಂದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೌದ್ಧ ಮತ್ತು ಜೈನ ಧರ್ಮ ಪ್ರಾಚೀನ ಕಾಲದವು. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುವಾಗ, ಭಾರತ ಜಗತ್ತಿಗೆ ಬುದ್ಧನನ್ನು ಕೊಟ್ಟಿದೆ; ಯುದ್ಧವನ್ನಲ್ಲ ಎಂದು ಹೇಳಿದ್ದರು. ಅವರು ವಿದೇಶಕ್ಕೆ ಹೋದಾಗಲೆಲ್ಲಾ, ಬುದ್ಧನ ನಾಡಿನಿಂದ ಬಂದಿರುವುದಾಗಿ ಹೇಳುತ್ತಾರೆ. ದೇಶಕ್ಕೆ ಬಂದಾಗ ಅದನ್ನು ಮರೆಯುತ್ತಾರೆ. ಆ ರೀತಿ ಆಗಬಾರದು’ ಎಂದು ಹೇಳಿದರು.
‘ಶಾಂತಿ, ಸಹನೆ, ಕರುಣೆ, ಸಂಸ್ಕೃತಿ, ಪ್ರೀತಿ ವಿಶ್ವಾಸ... ಇವೆಲ್ಲ ಬೌದ್ಧ ಧರ್ಮದ ಮೌಲ್ಯಗಳು. ಜಗತ್ತೇ ಬೌದ್ಧ ಧರ್ಮವನ್ನು ಒಪ್ಪಿಕೊಂಡಿದೆ. ಹಾಗಿರುವಾಗ ದೇಶದಲ್ಲಿ ಪ್ರಗತಿಪರ ರಾಜ್ಯವಾದ ಕರ್ನಾಟಕದಲ್ಲಿ ಶಿಕ್ಷಣ ಇಲಾಖೆಯು ಪಠ್ಯದಿಂದ ಬೌದ್ಧ ಧರ್ಮದ ಅಂಶಗಳನ್ನು ಕೈಬಿಡಲು ಹೊರಟಿರುವುದು ಸರಿಯಲ್ಲ’ ಎಂದರು.