ಕೊಳ್ಳೇಗಾಲ: ಮಳೆಯಿಂದಾಗಿ ತಾಲ್ಲೂಕಿನ ಕೆರೆ–ಕಟ್ಟೆಗಳು ಭರ್ತಿಯಾಗಿದ್ದು, ಕಾಲುವೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ.
ಈ ಕಾಲುವೆಯ ನೀರು ತಗ್ಗು ಪ್ರದೇಶಗಳ ಜಮೀನುಗಳಿಗೆ ನುಗ್ಗಿದ್ದು, ಹಲವು ಕಡೆಗಳಲ್ಲಿ ಬೆಳೆಗಳು ಜಲಾವೃತವಾಗಿವೆ. ರೈತರು ನಷ್ಟದ ಭೀತಿಯಲ್ಲಿದ್ದಾರೆ.
ತಾಲ್ಲೂಕಿನ ಕರಳಕಟ್ಟೆ ಗ್ರಾಮದಲ್ಲಿ ನಾಲೆಗಳು ತುಂಬಿ ಹರಿಯುತ್ತಿರುವುದರಿಂದ ನಾಲೆಗೆ ಬಿದ್ದು ಹಸುವೊಂದು ಮೃತಪಟ್ಟಿದೆ. ಗ್ರಾಮದ ರೈತ ಲಾರೆನ್ಸ್ ಎಂಬುವವರ ಐದು ಎಕರೆ ಜಮೀನಿನಲ್ಲಿ ಬೆಳೆದಿರುವ ಜೋಳ ನೆಲಕ್ಕೆ ಬಿದ್ದಿದೆ.
‘ಕೃಷಿಯೇ ನನಗೆ ಆಧಾರವಾಗಿದ್ದು, ಜೋಳದ ಉತ್ತಮ ಇಳುವರಿ ನಂಬಿದ್ದೆ. ಆದರೆ, ಈಗ ನಷ್ಟವಾಗಿದೆ’ ಎಂದು ಲಾರೆನ್ಸ್ ಅಳಲು ತೋಡಿಕೊಂಡರು.
ಮೋಳೆ ಬಡಾವಣೆಯ ನಟರಾಜು ಎಂಬುವರ ಕಬ್ಬಿನ ಗದ್ದೆಗೆ ನಾಲೆ ನೀರು ನುಗ್ಗಿದೆ.ಸೊಪ್ಪು, ಟೊಮೆಟೊ, ಈರುಳ್ಳಿ, ಮೂಲಂಗಿ, ಭತ್ತದ ಪೈರು ಸೇರಿದಂತೆ ಅನೇಕ ಬೆಳೆಗಳಿಗೆ ಹಾನಿಯಾಗಿದ್ದು, ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.