ಚಾಮರಾಜನಗರ: ತಾಲ್ಲೂಕಿನ ಪುಣಜನೂರು ಗ್ರಾಮದ ರೈತರೊಬ್ಬರು ಸಾಲ ಬಾಧೆಯಿಂದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದ ನಿವಾಸಿ ಆರ್ಮುಗಂ (55) ಆತ್ಮಹತ್ಯೆ ಮಾಡಿಕೊಂಡವರು. ಸೊಸೈಟಿ ಹಾಗೂ ಕೈಸಾಲ ಸೇರಿ ₹7ರಿಂದ ₹8 ಲಕ್ಷ ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಎರಡೂವರೆ ಎಕರೆ ಜಮೀನಿನಲ್ಲಿ ತರಕಾರಿ ಹಾಗೂ ವಿವಿಧ ಬೆಳೆಗಳನ್ನು ಬೆಳೆದಿದ್ದರು. ಉತ್ತಮ ಬೆಲೆ ಸಿಗದೆ ನಷ್ಟವಾಗಿತ್ತು ಎನ್ನಲಾಗಿದೆ.
ಭಾನುವಾರ ಮುಂಜಾವು ಜಮೀನಿಗೆ ತೆರಳಿದ ಆರ್ಮುಗಂ ಕ್ರಿಮಿನಾಶಕ ಸೇವಿಸಿದ್ದಾರೆ. ಬೆಳಿಗ್ಗೆ ಜಮೀನಿನಲ್ಲಿ ಬಿದ್ದಿದ್ದ ಅವರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರ್ಮುಗಂ ಅವರು ಸೊಸೈಟಿನಲ್ಲಿ ₹2ರಿಂದ ₹3 ಲಕ್ಷದಷ್ಟು ಸಾಲ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕೈಸಾಲವನ್ನೂ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಎಷ್ಟು ಎಂಬುದು ಇನ್ನೂ ಗೊತ್ತಾಗಿಲ್ಲ. ತನಿಖೆಯಿಂದ ಸಂಪೂರ್ಣ ಮಾಹಿತಿ ತಿಳಿಯಲಿದೆ’ ಎಂದು ಚಾಮರಾಜನಗರ ಪೂರ್ವ ಠಾಣೆಯ ಇನ್ಸ್ಪೆಕ್ಟರ್ ಆನಂದ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.