ಚಾಮರಾಜನಗರ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕನ್ನಡಧ್ವಜ ಸುಟ್ಟು, ಮಹಾನ್ ಮಾನವತಾವಾದಿ ಬಸವಣ್ಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವ ಎಂಇಎಸ್ ಅನ್ನು ರಾಜ್ಯದಲ್ಲಿ ಸಂಪೂರ್ಣ ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾಪಡೆಯ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಲಾಠಿ ಚಳವಳಿ ನಡೆಸಿದರು.
ಚಾಮರಾಜೇಶ್ವರ ಉದ್ಯಾನದ ಆವರಣದಿಂದ ಭುವನಶ್ವರಿ ವೃತ್ತದವರೆಗೂ ಲಾಠಿ ಹಿಡಿದುಕೊಂಡು ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಅಲ್ಲಿ ಕೆಲ ಕಾಲ ರಸ್ತೆ ತತಡೆ ನಡೆಸಿದರು. ‘ಕನ್ನಡಿಗರ ತಂಟೆಗೆ ಬಂದರೆ ಲಾಠಿಯಿಂದ ಹೊಡೆಯುತ್ತೇವೆ’ ಎಂದು ಹೇಳಿದ ಪ್ರತಿಭಟನಕಾರರು ರಾಜ್ಯ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ಎಂಇಎಸ್ ಸಂಘಟನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರು ಮಾತನಾಡಿ, ‘ಎಂಇಎಸ್ ಪುಂಡರು ಕರ್ನಾಟಕದಲ್ಲಿ ಮಾಡಿರುವ ಕೃತ್ಯ ಖಂಡನೀಯ. ಮಹಾರಾಷ್ಟ್ರ ಸರ್ಕಾರ ಕೂಡ ಇದರಲ್ಲಿ ಶಾಮೀಲಾಗಿದೆ. ಎಂಇಎಸ್ ಪುಂಡರ ವಿರುದ್ಧ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಎಂಇಎಸ್ ಅನ್ನು ರದ್ದುಪಡಿಸಬೇಕು. ಮರಾಠಿ ಅಭಿವೃದ್ದಿ ಪ್ರಾಧಿಕಾರ ರದ್ದು ಮಾಡಬೇಕು’ ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರವು ಎಂಇಎಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಪ್ರಕರಣ ದಾಖಲು ಮಾಡುತ್ತಿರುವುದು ಖಂಡನೀಯ. ಕೂಡಲೇ ಪ್ರಕರಣವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಾ.ಮುರಳಿ, ನಿಜಧ್ವನಿ ಗೋವಿಂದರಾಜು, ಚಾ.ವೆಂ.ರಾಜ್ ಗೋಪಾಲ್, ಚಾ.ರಾ.ಕುಮಾರ್, ಶಿವಶಂಕರನಾಯಕ, ಮಹೇಶ್ ಗೌಡ, ತಾಂಡವಮೂರ್ತಿ, ನಂಜುಂಡ, ಆಟೋ ಸುರೇಶ್, ಪಣ್ಯದಹುಂಡಿ ರಾಜು, ಪುಟ್ಟಮಲ್ಲೇಗೌಡ, ಕೃಷ್ಣ, ನಂಜುಂಡಸ್ವಾಮಿ ಇತರರು ಇದ್ದರು.