ಚಾಮರಾಜನಗರ: ಹೊಸ ಸಂವತ್ಸರ ಆಗಮನದ ಹಬ್ಬ ಯುಗಾದಿಯನ್ನು ಶನಿವಾರ (ಏ.2) ಸಂಭ್ರಮ ಸಡಗರದಿಂದ ಆಚರಿಸಲು ಜಿಲ್ಲೆಯಾದ್ಯಂತ ಹಿಂದೂಗಳು ಸಿದ್ಧತೆ ನಡೆಸಿದ್ದಾರೆ.
ಮುನ್ನಾದಿನವಾದ ಶುಕ್ರವಾರ ನಗರ, ಪಟ್ಟಣ ಪ್ರದೇಶಗಳಲ್ಲಿ ಜನರು ಹೂ, ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳು ಹಾಗೂ ಹೊಸ ಬಟ್ಟೆ ಖರೀದಿಯಲ್ಲಿ ತೊಡಗಿದ್ದರು.
ಸಂಜೆ ಕೆಲ ಹೊತ್ತು ಸುರಿದ ತುಂತುರು ಮಳೆ ಖರೀದಿ ಉತ್ಸಾಹಕ್ಕೆ ತಣ್ಣೀರೆರೆಚಿತು. ಸಂಜೆಯವರೆಗೂ ನಗರದ ಮಾರುಕಟ್ಟೆ, ಮಳಿಗೆಗಳಲ್ಲಿ ಹೆಚ್ಚು ಜನರು ಕಂಡು ಬರಲಿಲ್ಲ.
ಯುಗಾದಿ ಹಬ್ಬದಲ್ಲಿ ಹೂವುಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ ಅವು ದುಬಾರಿಯಾಗಿವೆ. ತರಕಾರಿ, ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
ನಗರಕ್ಕೆ ಸಮೀಪದ ಚೆನ್ನೀಪುರಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಶುಕ್ರವಾರ ಚೆನ್ನಾಗಿ ವ್ಯಾಪಾರ ನಡೆದಿದೆ. ಕನಕಾಂಬರ ಬಿಟ್ಟು ಎಲ್ಲ ಹೂವುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಮಲ್ಲಿಗೆ, ಕಾಕಡ, ಚೆಂಡುಹೂವಿಗೆ ಹೆಚ್ಚಿನ ಬೇಡಿಕೆ ಇದ್ದು, ಈ ವಾರದ ಆರಂಭಕ್ಕೆ ಹೋಲಿಸಿದರೆ, ಧಾರಣೆ ಒಂದೂವರೆ ಪಟ್ಟು ಹೆಚ್ಚಾಗಿದೆ.
ಕೆಜಿ ಮಲ್ಲಿಗೆಗೆ ಶುಕ್ರವಾರ ₹400 ಬೆಲೆ ಇತ್ತು. ಕಾಕಡ ₹480ರಿಂದ ₹500ರವರೆಗೆ ಏರಿದೆ. ಚೆಂಡು ಹೂವು ಕೆಜಿಗೆ ₹60 ಸುಗಂಧರಾಜ ಹಾಗೂ ಬಟನ್ ಗುಲಾಬಿಗೆ ₹160ರಿಂದ ₹200ರವರೆಗೂ ಬೆಲೆ ಇದೆ.
‘ಹಬ್ಬದ ಕಾರಣಕ್ಕೆ ಹೂವುಗಳಿಗೆ ಬೇಡಿಕೆ ಸೃಷ್ಟಿಯಾಗಿದ್ದು ಬೆಲೆ ಹೆಚ್ಚಾಗಿದೆ. ಶನಿವಾರವೂ ಬೇಡಿಕೆಇರಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಹಾಪ್ಕಾಮ್ಸ್ನಲ್ಲಿ ದ್ರಾಕ್ಷಿಯ ಬೆಲೆ ಕೆಜಿಗೆ ₹20ರಷ್ಟು ಜಾಸ್ತಿಯಾಗಿದ್ದ ಬಿಟ್ಟರೆ, ಹಬ್ಬದ ಕಾರಣದಿಂದ ತರಕಾರಿ ಹಾಗೂ ಹಣ್ಣುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿಲ್ಲ.