ಚಾಮರಾಜನಗರ: ನಗರದಿಂದ ಮೈಸೂರಿಗೆ ಕಾರಿನಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ ನಾಲ್ವರನ್ನು ಜಿಲ್ಲಾ ಸೈಬರ್, ಆರ್ಥಿಕ ಅಪರಾಧಗಳು ಹಾಗೂ ಮಾದಕ ವಸ್ತು ನಿಗ್ರಹ (ಸಿಇಎನ್) ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅವರ ಬಳಿ ಇದ್ದ ಸುಮಾರು2ಕೆಜಿ ಒಣ ಗಾಂಜಾ, ಕಾರನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಗಾಳಿಪುರದ ನಿವಾಸಿಗಳಾದ ಸೈಯದ್ ರುಮಾನ್, ಮಹಮ್ಮದ್ ಅಲ್ತಾಫ್, ಮೈಸೂರಿನ ವೆಂಕಟೇಗೌಡ, ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರಿನ ಗೋವಿಂದರಾಜು ಅವರು ಬಂಧಿತರು.
‘ಆರೋಪಿಗಳು ಗಾಂಜಾವನ್ನು ಮೈಸೂರಿಗೆ ತೆಗೆದುಕೊಂಡು ಹೋಗುತ್ತಿದ್ದರು. ನಮಗೆ ದೊರೆತ ಖಚಿತ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ನಗರದ ಹೊರ ವಲಯದಲ್ಲಿರುವ ದೊಡ್ಡರಾಯಪೇಟೆ ಕ್ರಾಸ್ ಬಳಿ ವಾಹನವನ್ನು ತಡೆದು, ನಾಲ್ವರನ್ನು ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಳ್ಳಲಾಯಿತು’ ಎಂದು ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಮೋಹಿತ್ ಸಹದೇವ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಹನೂರಿನ ವ್ಯಕ್ತಿಯೊಬ್ಬನಿಂದ ಆರೋಪಿಗಳು ಗಾಂಜಾ ಖರೀದಿಸಿದ್ದರು ಎಂದು ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.
ಕಾರ್ಯಾಚರಣೆ ನಡೆಸಿದ ಮೋಹಿತ್ ನೇತೃತ್ವದ ತಂಡದಲ್ಲಿ ಠಾಣೆಯ ಸಿಬ್ಬಂದಿ ಜಗದೀಶ್, ರಾಜು, ಮಂಜುನಾಥ್, ಮಲ್ಲಿಕಾ ಶಶಿಧರಮೂರ್ತಿ, ಸಿದ್ಧೇಗೌಡ ಇದ್ದರು.