ಹನೂರು (ಚಾಮರಾಜನಗರ ಜಿಲ್ಲೆ): ಕಾವೇರಿ ನದಿ ದಾಟಿ ಅಕ್ರಮವಾಗಿ ಅರಣ್ಯ ಪ್ರವೇಶಿಸಿದ್ದ ತಮಿಳುನಾಡಿನ ನಾಲ್ವರನ್ನು ಅರಣ್ಯಾಧಿಕಾರಿಗಳು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತಮಿಳುನಾಡಿನ ಯಮನೂರು ಗ್ರಾಮದ ಅಣ್ಣಾಮಲೈ, ಅಶೋಕ, ಅಣ್ಣಾದೊರೈ ಹಾಗೂ ಪೆರುಮಾಳ್ ಬಂಧಿತರು.
ಕಾವೇರಿ ವನ್ಯಧಾಮದ ಗೋಪಿನಾಥಂ ವನ್ಯಜೀವಿ ವಲಯದಲ್ಲಿ ಶನಿವಾರ ನದಿ ದಾಟಿ ಅರಣ್ಯ ಪ್ರವೇಶಿಸಿದ್ದಾರೆ. ಗಸ್ತಿನಲ್ಲಿದ್ದ ಸಿಬ್ಬಂದಿ ಹಿಡಿದು ವಿಚಾರಣೆ ನಡೆಸಿದಾಗ ಅವರ ಬಳಿ ಹಾರೆ, ಗುದ್ದಲಿ ಹಾಗೂ ಚೀಲಗಳಿರುವುದು ಪತ್ತೆಯಾಗಿದೆ. ಗೆಡ್ಡೆಗೆಣಸು ತೆಗೆಯಲು ಬಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಕಾವೇರಿ ವನ್ಯಧಾಮದ ಕೌದಳ್ಳಿ ವನ್ಯಜೀವಿ ವಲಯದಲ್ಲಿ ತಮಿಳುನಾಡಿನ ಎಂಟು ಜನರು ಕಾವೇರಿ ನದಿ ದಾಟಿ ಅರಣ್ಯದಲ್ಲಿ ವಾಸ್ತವ್ಯ ಹೂಡಿ ಮಾಕಳಿ ಬೇರು ಸಂಗ್ರಹಣೆಯಲ್ಲಿ ತೊಡಗಿದ್ದರು. ಇವರನ್ನು ಬಂಧಿಸಿದಾಗ ಇಬ್ಬರು ಮಹಿಳೆಯರಿದ್ದರು. ಈಗ ಇದೇ ವನ್ಯಧಾಮದಲ್ಲಿ ಮತ್ತೆ ನುಸುಳುಕೋರರು ಕಾಣತೊಡಗಿದ್ದಾರೆ.
ಈ ಹಿಂದೆಯೂ ಗೋಪಿನಾಥಂ, ಕೌದಳ್ಳಿ ವನ್ಯಜೀವಿ ವಲಯಗಳಲ್ಲಿ ನದಿ ದಾಟಿ ಬಂದು ಬೇಟೆಯಾಡುತ್ತಿರುವುದು ಸಾಮಾನ್ಯವಾಗಿತ್ತು. ಕಳೆದ ಮೂರು ವರ್ಷಗಳಿಂದೀಚೆಗೆ ಇದು ಕಡಿಮೆಯಾಗಿತ್ತು. ಈಗ ಮತ್ತೆ ಇಂಥ ಪ್ರಕರಣಗಳು ಮರುಕಳಿಸುತ್ತಿವೆ.