ಚಾಮರಾಜನಗರ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದಲ್ಲಿ ಬುಧವಾರ ಗಿರಿಜನ ಉತ್ಸವ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ ಅವರು, ‘ಗಿರಿಜನರು ತಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಹೇಳಿದರು.
ಅರಣ್ಯದಲ್ಲಿ ವನ್ಯಜೀವಿಗಳ ಜೊತೆ ನಿಕಟ ಸಂಪರ್ಕ ಹೊಂದಿರುವ ಗಿರಿಜನ ಸಮುದಾಯದ ಸಾಂಸ್ಕೃತಿಕ ವೈಭವವನ್ನು ಎಲ್ಲರಿಗೂ ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರ ಗಿರಿಜನ ಉತ್ಸವಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಅವರು ಮಾತನಾಡಿ, ‘ಗಿರಿಜನರ ಕಲೆ ಮತ್ತು ಸಂಸ್ಕೃತಿ ವಿಶಿಷ್ಟ. ನಮ್ಮ ಜನಪದಕ್ಕೆ ಅತ್ಯಂತ ಪೂರಕವಾದ, ವಿಶಿಷ್ಟವಾದ ಕಲಾ ವೈಭವ ಹೊಂದಿದೆ’ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ. ಶಾಂತಮೂರ್ತಿ ಕುಲಗಾಣ ಅವರು ಮಾತನಾಡಿದರು.
ಗಿರಿಜನರು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು. ಗೊರುಕನ ನೃತ್ಯ, ಪಿನಾಸಿ ನೃತ್ಯ, ಸೋಲಿಗರ ನೃತ್ಯ, ಸೋಲಿಗರ ಹಾಡು, ಮಾರಿ ಕುಣಿತ, ಹರಿಕಥೆಗಳು ಆಕರ್ಷಣೀಯವಾಗಿದ್ದವು. ವಿವಿಧ ವೇಷ ಭೂಷಣಗಳ ಮೂಲಕ ಗಿರಿಜನರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.
ಕಾಡಿದಪ್ರೇಕ್ಷಕರ ಕೊರತೆ: ಉತ್ಸವವನ್ನು ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದರೂ, ಪ್ರೇಕ್ಷಕರು ಸಂಖ್ಯೆ ಕಡಿಮೆ ಇತ್ತು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಚೆನ್ನಪ್ಪ, ಕೆರೆಹಳ್ಳಿ ನವೀನ್, ಬಿ.ಕೆ. ಬೊಮ್ಮಯ್ಯ, ಬಾಲರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚೆನ್ನಪ್ಪ, ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನಸ್ವಾಮಿ, ಸಿ.ಎಂ. ನರಸಿಂಹಮೂರ್ತಿ, ಡಾ. ಮಹೇಶ್ ಚಿಕ್ಕಲ್ಲೂರು ಇದ್ದರು.