ಚಾಮರಾಜನಗರ: ಯಳಂದೂರು ಹಾಗೂ ಚಾಮರಾಜನಗರ ತಾಲ್ಲೂಕುಗಳಲ್ಲಿ ಬುಧವಾರ ಸಂಜೆ ಧಾರಾಕಾರ ಮಳೆಯಾಗಿದೆ. ಕೊಳ್ಳೇಗಾಲ, ಹನೂರು ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಭಾಗದಲ್ಲಿ ವರ್ಷಧಾರೆಯಾಗಿದೆ.
ಜಿಲ್ಲೆಯಾದ್ಯಂತ ಬುಧವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಆದರೆ. ಮಧ್ಯಾಹ್ನದ ವರೆಗೂ ಮಳೆಯಾಗಿರಲಿಲ್ಲ.
ಜಿಲ್ಲಾ ಕೇಂದ್ರದಲ್ಲಿ ಸಂಜೆ 5.30ಕ್ಕೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಬಿರುಸಿನಿಂದ ಸುರಿದು, ನಂತರ ರಾತ್ರಿವರೆಗೂ ಜಿಟಿ ಜಿಟಿಯಾಗಿ ಸುರಿಯಿತು.
ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ, ಹರವೆ ಹೋಬಳಿಗಳಲ್ಲಿ ಉತ್ತಮ ವರ್ಷಧಾರೆಯಾಗಿದೆ. ಹರವೆ ಹೋಬಳಿಯಲ್ಲಿ 5.5 ಸೆಂ.ಮೀ ಮಳೆ ಸುರಿದಿದೆ. ಮಲೆಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7.5 ಸೆಂ.ಮೀ ಮಳೆ ಬಿದ್ದಿದೆ.
ನಗರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದರಿಂದ ಚರಂಡಿಗಳು ಉಕ್ಕಿ ಹರಿದವು. ನೀರು ರಸ್ತೆಯ ಮೇಲೆ ಹರಿದು ಜನ ಸಂಚಾರಕ್ಕೆ ತೊಡಕಾಯಿತು.