ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಎ.ಶಿವಣ್ಣ ಅವರು, ‘ರಾಜ್ಯ ಸರ್ಕಾರವು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮೂಲಕ ಜನವರಿ 18ರಂದು ಸುತ್ತೋಲೆಯೊಂದನ್ನು ಹೊರಡಿಸಿದ್ದು, ಜಾತಿ, ಧರ್ಮ, ವಂಶ ಸೇರಿದಂತೆ ಯಾವುದೇ ಸಮೂಹದ ಆಧಾರದ ಮೇಲೆ ಸಂಘಗಳನ್ನು ರಚಿಸುವಂತಿಲ್ಲ ಎಂದು ಅದರಲ್ಲಿ ಹೇಳಿದೆ. ಈಗಾಗಲೇ ಸ್ಥಾಪನೆಯಾಗಿರುವ ಇಂತಹ ಸಂಘಗಳ ಮಾನ್ಯತೆಯನ್ನು ಕೂಡಲೇ ರದ್ದುಗೊಳಿಸುವಂತೆ ಹಾಗೂ ಮಾನ್ಯತೆ ಪಡೆಯದೇ ಚಾಲ್ತಿಯಲ್ಲಿರುವ ಸಂಘಗಳನ್ನು ನಿರ್ಬಂಧಿಸುವಂತೆ ಇಲಾಖೆಗಳಿಗೆ ಸೂಚಿಸಿದೆ. ಇದು ಸಂವಿಧಾನ ಬಾಹಿರ ಕ್ರಮ’ ಎಂದು ಹೇಳಿದರು.