ಚಾಮರಾಜನಗರ: ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಜೋರು ಗಾಳಿ ಸಮೇತ ಬಿರುಸಿನ ಮಳೆಯಾಗಿದ್ದು, ಕೆಲವು ಕಡೆ ಮರಗಳು, ಬಾಳೆ ಗಿಡಗಳು ಧರೆಗೆ ಉರುಳಿವೆ.
ಚಾಮರಾಜನಗರ, ಚಂದಕವಾಡಿ ಹೋಬಳಿಯ ಹೆಬ್ಬಸೂರು, ದಡ್ಡದಹಳ್ಳಿಯ ಸೇರಿದಂತೆ ವಿವಿಧ ಕಡೆಗಳಲ್ಲಿ 15 ನಿಮಿಷಗಳಿಂದ 30 ನಿಮಿಷಗಳವರೆಗೆ ಮಳೆ ಸುರಿದಿದೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ದಿಢೀರ್ ಮೋಡ ಕವಿದು 3.30ರ ಸುಮಾರಿಗೆ ಗಾಳಿ ಸಮೇತ ಮಳೆಯಾಗಿದೆ. ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿರುವ ಬನ್ನಿಮರದ ದೊಡ್ಡ ರೆಂಬೆ ಧರೆಗೆ ಉರುಳಿದೆ.ನಗರದ ಹಲವು ಕಡೆಗಳಲ್ಲಿ ಅಂಗಡಿಗಳ ಫಲಕಗಳು ಗಾಳಿಗೆ ಸಿಲುಕಿ ಕೆಳಗಡೆ ಬಿದ್ದಿವೆ. ಚೆನ್ನೀಪುರದ ಮೋಳೆಯಲ್ಲಿ ಬಾಳೆ ತೋಟ ನಾಶವಾಗಿದೆ.
ರಸ್ತೆಯಲ್ಲಿ ಹರಿದ ನೀರು: ನಗರದಲ್ಲಿ 15 ನಿಮಿಷಗಳ ಕಾಲ ಬಂದ ಮಳೆಗೆ ರಸ್ತೆಯಲ್ಲೇ ನೀರು ಹರಿಯಿತು.ಬಿ.ರಾಚಯ್ಯ ಜೋಡಿ ರಸ್ತೆಯ ಚರಂಡಿ ಕಟ್ಟಿಕೊಂಡು ರಸ್ತೆಯಲ್ಲೇ ಹರಿಯಿತು.