ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಗಳಲ್ಲಿ 28 ದಿನಗಳಲ್ಲಿ ₹2.13 ಕೋಟಿ ನಗದು ಕಾಣಿಕೆ ಸಂಗ್ರಹವಾಗಿದೆ.
ಬೆಟ್ಟದಲ್ಲಿ ಶುಕ್ರವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಭಕ್ತರು 45 ಗ್ರಾಂ ಚಿನ್ನ ಹಾಗೂ 1.900 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಹುಂಡಿಗಳಿಗೆ ಹಾಕಿದ್ದಾರೆ.
ಈ ಹಿಂದೆ ಮಾರ್ಚ್ 10ರಂದು ಹುಂಡಿ ಎಣಿಕೆ ನಡೆದಿತ್ತು.
ಮಾರ್ಚ್ 29ರಿಂದ ಏಪ್ರಿಲ್ 2ರವರೆಗೆ ಯುಗಾದಿ ಜಾತ್ರಾ ಮಹೋತ್ಸವ ನಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬೆಟ್ಟಕ್ಕೆ ಭೇಟಿ ನೀಡಿ ಮಹದೇಶ್ವರ ಸ್ವಾಮಿಯ ದರ್ಶನ ಪಡೆದಿದ್ದರು.
‘ಬಿಗಿ ಬಂದೋಬಸ್ತ್ನಲ್ಲಿ ಶುಕ್ರವಾರ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆದಿದ್ದು, ನೋಟುಗಳ ರೂಪದಲ್ಲಿ ₹2,00,30,988 ಹಾಗೂ ನಾಣ್ಯದ ರೂಪದಲ್ಲಿ ₹13,22,107 ಸೇರಿದಂತೆ ₹2,13,53,095 ಸಂಗ್ರಹವಾಗಿದೆ’ ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.