ಚಾಮರಾಜನಗರ: ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೆರೆದಿಂಬ ಪೋಡಿನಲ್ಲಿ ಎರಡು ವರ್ಷಗಳಿಂದ ಮುಚ್ಚಿರುವ ವಸತಿಯುತ ವಿಶೇಷ ತರಬೇತಿ (ಆರ್ಎಸ್ಟಿ) ಶಾಲೆಯನ್ನು ಮತ್ತೆ ತೆರೆಯಲು ಕ್ರಮ ವಹಿಸುವ ಭರವಸೆಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ನೀಡಿದ್ದಾರೆ.
‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯಲ್ಲಿ ಪ್ರಕಟವಾಗಿದ್ದ ‘ಶಿಕ್ಷಣ ವಂಚಿತ ಸೋಲಿಗರ ಮಕ್ಕಳು’ ವರದಿ ನೋಡಿ ಸೋಲಿಗ ಮುಖಂಡ ಡಾ.ಸಿ.ಮಾದೇಗೌಡ ಅವರೊಂದಿಗೆ ಸಚಿವರು ಸೋಮವಾರವೇ ದೂರವಾಣಿಯಲ್ಲಿ ಮಾತನಾಡಿದ್ದಾರೆ. ‘ಮೊದಲು ಡಿಡಿಪಿಐ ಕರೆ ಮಾಡಿದರು. ನಂತರ ಸಚಿವರು ಮಾತನಾಡಿದರು.
‘ಇನ್ನು 2 ದಿನಗಳಲ್ಲಿ ಶಾಲೆ ಮತ್ತೆ ಆರಂಭಿಸಲು ಕ್ರಮ ವಹಿಸುತ್ತೇನೆ. ಆ ಸ್ಥಳಕ್ಕೂ ಭೇಟಿ ನೀಡುತ್ತೇನೆ’ ಎಂದು ಸುರೇಶ್ ಕುಮಾರ್ ಭರವಸೆ ನೀಡಿದರು’ ಎಂದು ಮಾದೇಗೌಡ ತಿಳಿಸಿದರು.
ಬಿಳಿಗಿರಿರಂಗನಬೆಟ್ಟದಿಂದ 16 ಕಿ.ಮೀ ದೂರದಲ್ಲಿರುವ ಕೆರೆದಿಂಬಪೋಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರ್ಎಸ್ಟಿ ಶಾಲೆಯು ಅನುದಾನ ಇಲ್ಲದೆ ಎರಡು ವರ್ಷಗಳಿಂದ ಮುಚ್ಚಿದೆ. ಹೀಗಾಗಿ, 22 ಸೋಲಿಗ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.