ಚಾಮರಾಜನಗರ: ಕೋವಿಡ್ ಭತ್ಯೆ ಮಂಜೂರು ಮಾಡುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಿರಿಯ ವೈದ್ಯರು ನಾಲ್ಕನೇ ದಿನವಾದ ಗುರುವಾರ ರಕ್ತದಾನ ಮಾಡಿ ಪ್ರತಿಭಟನೆ ನಡೆಸಿದರು.
ನಗರದ ಹೊರ ವಲಯದಲ್ಲಿರುವ ಬೋಧನಾ ಆಸ್ಪತ್ರೆಯ ರಕ್ತದಾನ ಕೇಂದ್ರದಲ್ಲಿ 15 ಮಂದಿ ವೈದ್ಯರು ರಕ್ತದಾನ ಮಾಡಿದರು. ನಂತರ ಆಸ್ಪತ್ರೆ ಮುಂಭಾಗ ಪ್ರತಿಭಟನೆ ಮುಂದುವರೆಸಿದರು.
ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ.ಧೀಮಂತ್ ಮಾತನಾಡಿ, ‘ಮುಷ್ಕರದ ಭಾಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ರೋಗಿಗಳಿಗೆ ರಕ್ತ ಬೇಕಿದ್ದಲ್ಲಿ ನಮ್ಮ ಕಡೆಯಿಂದ ಸಹಾಯವಾಗುತ್ತದೆ ಎಂಬ ಉದ್ದೇಶದಿಂದ ರಕ್ತದಾನ ಮಾಡಲಾಗುತ್ತಿದೆ’ ಎಂದರು.
‘ಸರ್ಕಾರವು ನೀಡಿರುವ ಭರವಸೆಯಂತೆ ನಡೆದುಕೊಂಡಿಲ್ಲ. ಮುಂಬರುವ ದಿನಗಳಲ್ಲಿ ಭತ್ಯೆ ನೀಡದಿದ್ದರೆ ತುರ್ತು ಸೇವೆಗಳನ್ನೂ ಸ್ಥಗಿತಗೊಳಿಸಿ ಹೋರಾಟ ಮಾಡಬೇಕಾಗುತ್ತದೆ. ಇದಕ್ಕೆಸರ್ಕಾರವೇ ನೇರ ಹೊಣೆಯಾಗಿರುತ್ತದೆ’ ಎಂದು ಕಿಡಿಕಾರಿದರು.
‘15 ದಿನದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದ್ದಾರೆ. ಆದರೆ, ವೈದ್ಯಕೀಯ ಶಿಕ್ಷಣ ಸಚಿವರು ಮೌಖಿಕವಾಗಿ ಭರವಸೆ ನೀಡುವ ಬದಲು ಪತ್ರದ ಮೂಲಕ ಆದೇಶ ಹೊರಡಿಸಲಿ. ನಾವು ಹುಸಿ ಭರವಸೆ ನಂಬುವುದಿಲ್ಲ’ ಎಂದರು.
ಸಂಘದ ಉಪಾಧ್ಯಕ್ಷೆ ಡಾ.ಸಹನಾ, ಡಾ.ಮೋಹನ್, ಡಾ.ತೇಜಸ್ವಿ, ಡಾ.ಗಣೇಶ್, ಡಾ.ಹರ್ಷಿತಾ, ಡಾ.ಅಸ್ತಾ ಸೇರಿದಂತೆ ಕಿರಿಯ ವೈದ್ಯರು ಮುಷ್ಕರದಲ್ಲಿ ಭಾಗಿಯಾಗಿದ್ದರು.