ಚಾಮರಾಜನಗರ: ಬಹು ದಿನಗಳ ನಂತರ ಜಿಲ್ಲೆಯ ಕೆಲವು ಕಡೆಗಳಲ್ಲಿ ಮಂಗಳವಾರ ಮಳೆಯಾಗಿದೆ.
ನಗರದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಯಳಂದೂರು, ಕೊಳ್ಳೇಗಾಲದ ಸುತ್ತಮುತ್ತ ತುಂತುರು ಮಳೆಯಾಗಿದೆ. ಮಹದೇಶ್ವರ ಬೆಟ್ಟದಲ್ಲೂ ವರ್ಷಧಾರೆ ಸುರಿದಿದೆ. ಬಿಳಿಗಿರಿ ರಂಗನಬೆಟ್ಟದಲ್ಲಿ ರಾತ್ರಿ ಮಳೆಯಾಗಿದೆ.
ಎರಡು ವಾರಗಳಿಂದ ಹೆಚ್ಚು ಮಳೆಯಾಗಿರಲಿಲ್ಲ. ಬಿಸಿಲಿನ ವಾತಾವರಣ ಇತ್ತು. ಮೋಡ ಕವಿದ ವಾತಾವರಣ ಇದ್ದರೂ, ಕೆಲವು ಹನಿಗಳು ಬಿದ್ದು, ಮಳೆ ದೂರವಾಗುತ್ತಿತ್ತು.
ಜಿಲ್ಲಾ ಕೇಂದ್ರದಲ್ಲಿ ಮಂಗಳವಾರ ಮಧ್ಯಾಹ್ಬ 3.30ವರೆಗೂ ಬಿಸಿಲು ಇತ್ತು. ನಾಲ್ಕು ಗಂಟೆಯ ನಂತರ ಮೋಡ ಕವಿಯಲು ಆರಂಭವಾಯಿತು. 4.30ರ ನಂತರ ಸಣ್ಣದಾಗಿ ಆರಂಭವಾದ ಮಳೆ ಐದು ಗಂಟೆಯ ವೇಳೆಗೆ ಬಿರುಸು ಪಡೆದು, ಉತ್ತಮವಾಗಿ ಮಳೆಯಾಯಿತು.ವಾಹನಗಳು ಜನರ ಸಂಚಾರಕ್ಕೆ ಸ್ವಲ್ಪ ಅಡ್ಡಿಯಾಯಿತು.