ಚಾಮರಾಜನಗರ:ಕರ್ನಾಟಕ ಸೇನಾಪಡೆಯ ಕಾರ್ಯಕರ್ತರು ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿ, ಈಡುಗಾಯಿ ಒಡೆದುಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಆರಂಭವಾಗಿರುವುದನ್ನು ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಕೊರೊನಾ ಸೇನಾನಿಗಳು ಹಾಗೂ ಸಾರ್ವಜನಿಕರಿಗೆ ಸಿಹಿಯನ್ನು ಹಂಚಿದರು. ಕೋವಿಡ್ಗೆ ಲಸಿಕೆ ಕಂಡು ಹಿಡಿದ ವಿಜ್ಞಾನಿಗಳು, ಕೇಂದ್ರ ಸರ್ಕಾರ ಹಾಗೂ ಕೊರೊನಾ ವಾರಿಯರ್ಸ್ಗಳ ಪರವಾಗಿ ಜಯಘೋಷ ಮಾಡಿದರು.
ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರಿಗೆ ಏನೂ ತೊಂದರೆಯಾಗದಿರಲಿ, ಲಸಿಕೆ ವಿತರಣೆ ಅಭಿಯಾನ ಯಶಸ್ವಿಯಾಗಲಿ ಎಂದು ಚಾಮರಾಜೇಶ್ವರಸ್ವಾಮಿಯನ್ನು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೇನಾಪಡೆಯಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರು, ‘ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ ಇದಾಗಿದ್ದು, ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್ ಹೆಮ್ಮಾರಿಯ ನಿಯಂತ್ರಣಕ್ಕೆ ಔಷಧ ಕಂಡು ಹಿಡಿದು ಕೊರೊನಾ ಸೇನಾನಿಗಳಿಗೆ ಲಸಿಕೆ ವಿತರಣೆ ಮಾಡುತ್ತಿರುವುದು ತುಂಬಾ ಸಂತಸಪಡುವ ಸಂಗತಿ’ ಎಂದರು.
ಶಾ.ಮುರಳಿ, ಚಾ.ವೆಂ.ರಾಜ್ಗೋಪಾಲ್, ಹ.ವಿ.ನಟರಾಜು, ನಿಜಧ್ವನಿಗೋವಿಂದರಾಜು, ವೀರಭದ್ರ, ನಂಜುಂಡ, ಶಿವಶಂಕರನಾಯಕ, ತಾಂಡವಮೂರ್ತಿ, ಲಿಂಗರಾಜು, ಎಂಡಿಆರ್ ಸ್ವಾಮಿ, ಶಂಕರ್, ಸಾಗರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.