ಕೊಳ್ಳೇಗಾಲ: ತಾಲ್ಲೂಕಿನ ಹಳೇ ಅಣಗಳ್ಳಿ ಗ್ರಾಮಸ್ಥರು ಸೋಮವಾರ ಮಹಿಷ ದಸರಾವನ್ನು ಆಚರಿಸಿದರು.
ಗ್ರಾಮದ ಮಾರಿಗುಡಿ ದೇವಾಲಯದ ಮುಂಭಾಗದಲ್ಲಿ ಮಹಿಷ ರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸುವ ಮೂಲಕ ಆಚರಿಸಿದರು. ನಂತರ ಟ್ರಾಕ್ಟರ್ನಲ್ಲಿ ಭಾವಚಿತ್ರಗಳನ್ನು ಇಟ್ಟು ಮೆರವಣಿಗೆ ನಡೆಸಿದರು. ಈ ವೇಳೆ ಯುವಕರು, ಹಿರಿಯರು ಕುಣಿದು ಕುಪ್ಪಳಿಸಿದರು.
ಮಹಿಷ ದಸರಾ ಅಂಗವಾಗಿ ಮಹಿಳೆಯರಿಗೆ ಸೀರೆಗಳನ್ನು ಗ್ರಾಮದ ಮುಖಂಡ ಬಸವರಾಜು ವಿತರಿಸಿದರು.
ಬಳಿಕ ಮಾತನಾಡಿದ ಅವರು, ‘ಕೋವಿಡ್ ಕಾರಣದಿಂದ ಸರ್ಕಾರವು ಮೈಸೂರು ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸುತ್ತಿದೆ. ಈ ದೇಶದ ಮೂಲ ವಾರಸುದಾರ ಹಾಗೂ ಪ್ರಕೃತಿ ರಕ್ಷಕ ಮಹಿಷ ರಾಜನ ಹಬ್ಬವನ್ನು ನಾವು ಆಚರಣೆ ಮಾಡುತ್ತಿದ್ದೇವೆ. ಮಹಿಷ ರಾಜ ಇದ್ದ ಕಾಲದಲ್ಲಿ ಇಡೀ ರಾಜ್ಯದ ಆಡಳಿತವನ್ನು ಉತ್ತಮವಾಗಿ ನಡೆಸುತ್ತಿದ್ದರು. ಜನರಿಗೆ ಒಳ್ಳೆಯದಾಗಲಿ ಎಂದು ಅವರು ಬಲಿದಾನವಾದರು. ಆದ್ದರಿಂದ ಮಹಿಷ ದಸರಾವನ್ನು ಗ್ರಾಮದ ಜನರು ಹಾಗೂ ರೈತರು ಸೇರಿ ಆಚರಣೆ ಮಾಡಲಾಗಿದೆ. ಇನ್ನುಮುಂದೆ ರಾಜ್ಯದಾದ್ಯಂತ ಮಹಿಷ ದಸರಾ ನಡೆಯಬೇಕು’ ಎಂದು ಆಗ್ರಹಿಸಿದರು.