ಮಹದೇಶ್ವರ ಬೆಟ್ಟ: ಮಹದೇಶ್ವರ ದೇವಾಲಯದಲ್ಲಿ ಸಂಗ್ರಹವಾಗಿದ್ದ ಹುಂಡಿ ಹಣದಎಣಿಕೆ ಹಾಗೂ ಪರ್ಕಾವಣೆ ಕಾರ್ಯ ಗುರುವಾರ ನಡೆಯಿತು.
₹ 2.21 ಕೋಟಿ ನಗದು, 80 ಗ್ರಾಂ. ಚಿನ್ನ ಹಾಗೂ 2 ಕೆ.ಜಿ ಬೆಳ್ಳಿವಸ್ತುಗಳು ಸಂಗ್ರಹವಾಗಿವೆ.
ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ದೇವಾಲಯದಲ್ಲಿದ್ದ ಹುಂಡಿಗಳನ್ನು ಪರ್ಕಾವಣೆ ಮಾಡಲಾಯಿತು. ನಂತರ ಹುಂಡಿಯಲ್ಲಿದ್ದ ಹಣವನ್ನು ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣಕ್ಕೆ ಸಾಗಿಸಿ ಎಣಿಕೆ ಮಾಡಲಾಯಿತು.
ಒಂದು ತಿಂಗಳಿನಲ್ಲಿ ಒಟ್ಟು ₹ 2,21,59,810 ಸಂಗ್ರಹಗೊಂಡಿದ್ದು, ಕಳೆದ ಬಾರಿಗಿಂತ ₹ 29 ಲಕ್ಷ ಹೆಚ್ಚುವರಿಯಾಗಿ ಸಂಗ್ರಹವಾಗಿದೆ.
ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಉಪಕಾರ್ಯದರ್ಶಿ ಬಸವರಾಜಪ್ಪ, ಭಾರತೀಯ ಸ್ಟೇಟ್ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಮತ್ತು ದೇವಾಲಯದ ಸಿಬ್ಬಂದಿ ಪಾಲ್ಗೊಂಡಿದ್ದರು.