ಹನೂರು: ಮಲೆ ಮಹದೇಶ್ವರ ವನ್ಯ ಧಾಮ ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆಯಾಗುತ್ತಿದ್ದಂತೆ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ವಿಶೇಷ ಯೋಜನೆ ರೂಪಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ವನ್ಯಧಾಮದಲ್ಲಿ ಈಗಾಗಲೇ ಮೂರು ಉಪ ವಿಭಾಗಗಳು, ಏಳು ವನ್ಯಜೀವಿ ವಲಯಗಳಿವೆ. ಎಲ್ಲಾ ವಲಯಗಳಲ್ಲೂ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ್ದು, ಹುಲಿ ಸಂರಕ್ಷಿತ ಪ್ರದೇಶ ಘೋಷಣೆಯಾಗುತ್ತಿದ್ದಂತೆ ಸಂರಕ್ಷಣಾ ಕ್ರಮ ಇನ್ನಷ್ಟು ಹೆಚ್ಚಾಗಲಿದೆ.
ಇದರ ಜತೆಗೆ ಎಡೆಯಾರಳ್ಳಿ ಕಾರಿಡಾರ್ನಲ್ಲೂ ಹೆಚ್ಚಿನ ಸುರಕ್ಷತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಇಲಾಖೆ ಮುಂದಾಗಿದೆ.
365 ದಿನವೂ ನೀರಿನ ಸೌಲಭ್ಯ: ವಿಭಾಗದ ವತಿಯಿಂದ ಈಚೆಗೆ ವನ್ಯ ಧಾಮದ ವಿವಿಧ ವಲಯಗಳಲ್ಲಿ ಅಳ ವಡಿಸಿದ್ದ ಕ್ಯಾಮೆರಾಗಳಲ್ಲಿ ಹೆಚ್ಚಿನ ಬಲಿ ಪ್ರಾಣಿ ಸೆರೆಯಾಗಿವೆ.
ಜಿಂಕೆ, ಕಡವೆ, ಕಾಡೆಮ್ಮೆ(ಕಾಟಿ) ಸೇರಿದಂತೆ ಹಲವು ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಕುಡಿಯುವ ನೀರಿಗಾಗಿ ಈ ಪ್ರಾಣಿಗಳು ಅರಣ್ಯದಿಂದ ಹೊರಗೆ ಬರುತ್ತವೆ.
ಇದನ್ನು ತಪ್ಪಿಸುವ ಸಲುವಾಗಿ ವಲಯಗಳಲ್ಲಿ ಕೆರೆಗಳನ್ನು ನಿರ್ಮಿಸಿ ನೀರು ತುಂಬಿಸುವುದು. ವರ್ಷವಿಡಿ ಅವುಗಳಲ್ಲಿ ನೀರು ತುಂಬುವ ಸಲುವಾಗಿ ಸೋಲಾರ್ ಪಂಪ್ ಅಳವಡಿಸಲು ಯೋಜನೆ ರೂಪಿಸ ಲಾಗುವುದು ಎನ್ನುತ್ತಾರೆ ಅರಣ್ಯಾಧಿಕಾರಿಗಳು.
ಶೇ 20ರಷ್ಟು ಸಿಬ್ಬಂದಿ ಹೆಚ್ಚಳ: ಏಳು ವನ್ಯಜೀವಿ ವಲಯಗಳಲ್ಲಿ ಎಲ್ಲಾ ಹಂತದ ಸಿಬ್ಬಂದಿ ಸೇರಿ 100ಕ್ಕೂ ಹೆಚ್ಚು ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಲಿ ಸಂರಕ್ಷಿತ ಪ್ರದೇಶವಾದರೆ 20 ಹುದ್ದೆಗಳು ಹೆಚ್ಚುವರಿಯಾಗಿ ಸೃಷ್ಟಿಯಾಗಲಿವೆ.
ಕಳ್ಳಬೇಟೆ ಪ್ರಕರಣ ತಡೆಗಟ್ಟುವ ಸಲುವಾಗಿ ಇನ್ನೂ ಹೆಚ್ಚಿನ ಸಂಖ್ಯೆ ಯಲ್ಲಿ ಕಳ್ಳಬೇಟೆ ತಡೆ ಶಿಬಿರ ನಿರ್ಮಿಸಲಾಗು ವುದು. ಈಗಾಗಲೇ ವನ್ಯಧಾಮದಲ್ಲಿ 37 ಕಳ್ಳಬೇಟೆ ತಡೆ ಶಿಬಿರಗಳಿವೆ.
ಹುಲಿ ಸಂರಕ್ಷಿತ ಪ್ರದೇಶವಾದರೆ ಇದರ ಈ ಸಂಖ್ಯೆ 50ಕ್ಕೇರಲಿದೆ. ಸ್ಥಳೀಯ ವಲಯ ಅರಣ್ಯಾಧಿಕಾರಿಗಳು ನೀಡುವ ವರದಿ ಆಧರಿಸಿ ಮುಖ್ಯ ಎನಿಸಿದ ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ಕಳ್ಳಬೇಟೆ ತಡೆ ಶಿಬಿರ ನಿರ್ಮಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ಚೆಕ್ ಪೋಸ್ಟ್: ವನ್ಯಜೀವಿ ಸಂರಕ್ಷಣೆ ಹಾಗೂ ಅಕ್ರಮ ಚಟುವಟಿಕೆ ತಡೆಗಟ್ಟುವ ಉದ್ದೇಶದಿಂದ ಹನೂರು-ಅಜ್ಜೀಪುರ ರಸ್ತೆ, ಕೌದಳ್ಳಿ-ಮಹದೇಶ್ವರ ಬೆಟ್ಟ, ರಾಮಾಪುರ-ನಾಲ್ ರೋಡ್ ಹಾಗೂ ಅಂತರರಾಜ್ಯ ಗಡಿ ಗರಿಕೆಕಂಡಿಯಲ್ಲಿ ಚೆಕ್ಪೋಸ್ಟ್ ನಿರ್ಮಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ಕಳ್ಳಬೇಟೆ, ಅರಣ್ಯದೊಳಗೆ ಅನೈತಿಕ ಚಟುವಟಿಕೆಗಳು, ಅತಿ ವೇಗ, ಸಂದೇಹ ಬರುವ ವಾಹನಗಳನ್ನು ತಪಾಸಣೆ ನಡೆಸಲು ಮಾತ್ರ ಈ ಚೆಕ್ಪೋಸ್ಟ್ ನಿರ್ಮಿಸಲಾಗುವುದು. ಸ್ಥಳೀಯರ ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಿರಲ್ಲ. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಗಳು ಹಾಗೂ ಸಾರ್ವಜನಿಕರು ನಿರಾ ತಂಕವಾಗಿ ಓಡಾಡಬಹುದಾಗಿದೆ. ಆದ್ದರಿಂದ ಸ್ಥಳೀಯರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.
ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆಯಾದರೆ ಪ್ರತಿ ವರ್ಷ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ₹ 10 ಕೋಟಿ ಅನುದಾನ ಸಿಗಲಿದೆ.
- ವಿ.ಏಡುಕುಂಡಲು, ಡಿಸಿಎಫ್, ಮಲೆ ಮಹದೇಶ್ವರ ವನ್ಯಧಾಮ
ಹುಲಿ ಸಂರಕ್ಷಿತ ಪ್ರದೇಶವಾಗುವುದರಿಂದ ವನ್ಯಪ್ರಾಣಿಗಳ ಸಂರಕ್ಷಣೆಗೆ ಒತ್ತು ಸಿಗಲಿದೆ. ಸಂರಕ್ಷಿತ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿಯಾಗುತ್ತದೆ. ಸಿಬ್ಬಂದಿಗೆ ಹೆಚ್ಚುವರಿ ಭತ್ಯೆ ಸಿಗಲಿದೆ
- ಮಲ್ಲೇಶಪ್ಪ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.