ಚಾಮರಾಜನಗರ: ತಾಲ್ಲೂಕಿನ ಕಿಲಗೆರೆ ಸಮೀಪದ ಬೇಲದಕುಪ್ಪೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಶನಿವಾರ ಪತ್ನಿಯನ್ನು ಹತ್ಯೆ ಮಾಡಿ ತೆರಕಣಾಂಬಿ ಠಾಣೆಗೆ ಹೋಗಿ ಪೊಲೀಸರಿಗೆ ಶರಣಾಗಿದ್ದಾರೆ.
ಗ್ರಾಮದ ಮಹದೇವಪ್ಪ (55) ಅವರು ಶರಣಾಗಿರುವ ಆರೋಪಿ. ಪತ್ನಿ ಮಹದೇವಮ್ಮ (45) ಅವರ ಜೊತೆ ಯಾವಾಗಲೂ ಜಗಳವಾಡುತ್ತಿದ್ದ ಮಹದೇವಪ್ಪ ಅವರು ಶನಿವಾರ ಬೆಳಿಗ್ಗೆಯೂ ಜಗಳವಾಡಿ ಕೋಪದಿಂದ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಮಹದೇವಪ್ಪ ಹಾಗೂ ಮಹದೇವಮ್ಮ ಅವರು ತಾಲ್ಲೂಕಿನ ಕಿಲಗೆರೆ ಹಾಗೂ ಮಾದಲವಾಡಿ ಗ್ರಾಮದ ನಡುವಿನ ಬೇಲದಕುಪ್ಪೆ ಗ್ರಾಮದ ಜಮೀನಿನಲ್ಲಿ ಶೆಡ್ ನಿರ್ಮಿಸಿಕೊಂಡು ವಾಸವಾಗಿದ್ದರು.
ಇಬ್ಬರ ನಡುವೆಯೂ ಆಗಾಗ ಜಗಳ ನಡೆಯುತ್ತಿತ್ತು. ಪತ್ನಿಯ ಶೀಲವನ್ನು ಮಹದೇವಪ್ಪ ಅವರು ಶಂಕಿಸುತ್ತಿದ್ದರು ಎಂದು ಅವರ ಅಳಿಯ ದೂರಿನಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ರಾಜ್, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ತೆರಕಣಾಂಬಿ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.