ಚಾಮರಾಜನಗರ: ವರಮಹಾಲಕ್ಷ್ಮೀ ಸಮಯದಲ್ಲಿ ಏರಿಕೆಯಾಗಿದ್ದ ಹೂವುಗಳ ಬೆಲೆ ಈಗ ಕುಸಿದಿದೆ. ಕೆಲವು ತರಕಾರಿ, ಹಣ್ಣುಗಳ ಬೆಲೆಯಲ್ಲಿ ಏರಿಳಿತ ಕಂಡು ಬಂದಿದೆ. ಮಾಂಸದ ಮಾರುಕಟ್ಟೆಯಲ್ಲಿ ಚಿಕನ್ ಬೆಲೆ ಕೊಂಚ ಇಳಿದಿದೆ.
ತರಕಾರಿಗಳಪೈಕಿ ಟೊಮೆಟೊ, ಬೀನ್ಸ್ಗಳ ಬೆಲೆ ಕೆಜಿಗೆ ₹5 ಕಡಿಮೆಯಾಗಿದೆ. ಹಾಪ್ಕಾಮ್ಸ್ನಲ್ಲಿ ಕಳೆದ ವಾರ ₹20ರಷ್ಟಿದ್ದ ಟೊಮೆಟೊ ಈ ವಾರ ₹15 ಇತ್ತು. ₹30–₹40ರಷ್ಟಿದ್ದ ಬೀನ್ಸ್ ಬೆಲೆ ₹25–₹30ಕ್ಕೆ ಕುಸಿದಿದೆ.ಇತರ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
ಹಣ್ಣುಗಳ ಪೈಕಿ ಸೇಬು ಇನ್ನಷ್ಟು ದುಬಾರಿಯಾಗಿದೆ. ಹಾಪ್ಕಾಮ್ಸ್ನಲ್ಲಿ ಕೆಜಿಗೆ ₹200ರವರೆಗೆ ಬೆಲೆ ಇದೆ. ಕಳೆದ ವಾರ ₹160ರಿಂದ ₹180 ಇತ್ತು. ಉಳಿದ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
ಹೂವುಗಳ ಪೈಕಿ ಕನಕಾಂಬರ ಬಿಟ್ಟು ಉಳಿದ ಎಲ್ಲ ಹೂವುಗಳ ಬೆಲೆ ಕುಸಿದಿದೆ. ಕಳೆದ ವಾರದ ಆರಂಭದಲ್ಲಿ 1000 ಇದ್ದ ಕೆಜಿ ಕನಕಾಂಬರದ ಬೆಲೆ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ₹2000ಕ್ಕೆ ಏರಿತ್ತು. ಮಲ್ಲಿಗೆ, ಸುಗಂಧ ರಾಜ ಎಲ್ಲವೂ ದುಬಾರಿಯಾಗಿದ್ದವು.
ಹಬ್ಬ ಮುಗಿದ ಎರಡು ದಿನಗಳ ಬಳಿಕ ಹೂವಿಗೆ ಬೇಡಿಕೆ ಕುಸಿದಿದ್ದು, ಮತ್ತೆ ಮೊದಲಿನ ದರಕ್ಕೆ ಬಂದು ನಿಂತಿವೆ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕೆಜಿ ಕನಕಾಂಬರಕ್ಕೆ ₹1000, ಮಲ್ಲಿಗೆಗೆ ₹100–₹120, ಕಾಕಡ ₹60–₹80, ಸುಗಂಧ ರಾಜ ಹೂವಿಗೆ ₹60–₹80 ಇತ್ತು.
‘ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಸಹಜವಾಗಿ ದರವೂ ಹೆಚ್ಚಾಗಿತ್ತು. ಆ ಬಳಿಕ ಕಡಿಮೆಯಾಗಿದೆ’ ಎಂದು ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಚಿಕನ್ ಕೊಂಚ ಅಗ್ಗ:ಮಾಂಸ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ಪ್ರತಿ ದಿನ ಏರಿತವಾಗುತ್ತಿದ್ದು, ಸೋಮವಾರ 100 ಮೊಟ್ಟೆಗೆ ₹373 ಬೆಲೆ ಇತ್ತು.
‘ಕೆಲವು ದಿನಗಳಿಂದೀಚೆಗೆ ಬೇಡಿಕೆಗೆ ಅನುಸಾರವಾಗಿ ಪ್ರತಿ ದಿನ ಬೆಲೆ ನಿಗದಿಪಡಿಸಲಾಗುತ್ತಿದೆ. ಪ್ರತಿ ದಿನವೂ ಏರಿಳಿತ ಇರುತ್ತದೆ’ ಎಂದು ವ್ಯಾಪಾರಿ ನವೀನ್ ಅವರು ತಿಳಿಸಿದರು.
ಕೆಲವು ದಿನಗಳಿಂದಚಿಕನ್ ಬೆಲೆ ಸ್ವಲ್ಪ ಕಡಿಮೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಚಿಕನ್ ಬೆಲೆ ₹140–₹160ರವೆಗೆ ಇದೆ.