ಚಾಮರಾಜನಗರ: ಗ್ರ್ಯಾವಿಟಿ ಸೈನ್ಸ್ ಫೌಂಡೇಷನ್ ಸಂಸ್ಥೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ನಗರದ ಡಿಎಆರ್ ಕೇಂದ್ರ ಸಭಾಂಗಣದಲ್ಲಿ ಭಾನುವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮೇಳವನ್ನೂ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್ ಅವರು, ‘ಸರ್ ಸಿ.ವಿ.ರಾಮನ್ ಅವರ ರಾಮನ್ ಪರಿಣಾಮ ಎಂಬ ಸಂಶೋಧನೆಯ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವಿಜ್ಞಾನದೆಡೆಗೆ ಆಸಕ್ತಿಯನ್ನು ಮೂಡಿಸುತ್ತವೆ’ ಎಂದರು.
ಗ್ರ್ಯಾವಿಟಿ ಸೈನ್ಸ್ ಫೌಂಡೇಷನ್ ಸಂಸ್ಥಾಪಕ ಕಾರ್ಯದರ್ಶಿ ಎ.ಎಸ್.ಅಭಿಷೇಕ್ ಅವರು, ರಾಮನ್ ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಖ್ಯಾತ ವೈದ್ಯ ಡಾ.ಎನ್.ಎಂ.ಶಾಮಸುಂದರ್ ಅವರು ಅಂಗರಚನ ಶಾಸ್ತ್ರದ ಬಗ್ಗೆ ಉಪನ್ಯಾಸ ನೀಡಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಜ್ಞಾನ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಹಾಗೂ ಉಪನ್ಯಾಸದ ನಂತರ ವಿಜ್ಞಾನ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಅಧ್ಯಕ್ಷ ಎಸ್.ಪ್ರಕಾಶ್, ಡಿವೈಎಸ್ಪಿ ಸೋಮಣ್ಣ, ಆರ್ಪಿಐ ರಂಗಸ್ವಾಮಿ, ಪಿಎಸ್ಐ ರವೀಂದ್ರ, ಆರ್ಎಸ್ಐ ನಾಗನಾಯಕ, ಸಂಸ್ಥೆಯ ನಿರ್ದೇಶಕ ಮುರಳಿ, ಸಂತೋಷ್ಕುಮಾರ್. ಪಿ, ಸೋಮರಾಜು.ಕೆ, ಗಾಯತ್ರಿ. ಎಂ, ಪೊಲೀಸ್ ಸಿಬ್ಬಂದಿ ವರ್ಗ, ಪೋಷಕರು ಮತ್ತು ವಿದ್ಯಾರ್ಥಿಗಳು ಇದ್ದರು.