ಚಾಮರಾಜನಗರ: ನಗರದ ಹೊರ ವಲಯದ ಯಡಬೆಟ್ಟದಲ್ಲಿ ನಿರ್ಮಿಸಲಾಗಿರುವ,ಇದೇ 7ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಉದ್ಘಾಟಿಸಿದ್ದ 450 ಹಾಸಿಗೆ ಸಾಮರ್ಥ್ಯದ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಯಲ್ಲಿ ಸೋಮವಾರದಿಂದ ಆರೋಗ್ಯ ಸೇವೆ ಲಭ್ಯವಾಗಲಿದೆ.
ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯು ಜೋಡಿ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಯಿಂದ ಹೊಸ ಆಸ್ಪತ್ರೆಗೆ, ತುರ್ತು ಚಿಕಿತ್ಸಾ ವಿಭಾಗ ಸೇರಿದಂತೆ ಬಹುತೇಕ ಎಲ್ಲ ವಿಭಾಗಗಳನ್ನು ಸ್ಥಳಾಂತರಿಸುತ್ತಿದೆ. ಹಳೆ ಆಸ್ಪತ್ರೆಯಲ್ಲಿ ಹೆರಿಗೆ, ಮಕ್ಕಳ ಹಾಗೂ ಕೋವಿಡ್ ವಿಭಾಗಗಳು ಮಾತ್ರ ಇರಲಿವೆ.
‘ಸೋಮವಾರದಿಂದ ಆರೋಗ್ಯ ಸೇವೆ ಆಸ್ಪತ್ರೆಯಲ್ಲಿ ಆರಂಭವಾಗಲಿದೆ. ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ. ಪೂರ್ಣಗೊಳ್ಳಲು ಒಂದು ವಾರ ಬೇಕಾಗಬಹುದು. ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಬೇಕು. ಸ್ವಲ್ಪ ದಿನ ಕೆಲವು ಸೇವೆಗಳು ಹಳೆ ಆಸ್ಪತ್ರೆಯಲ್ಲೂ ಲಭ್ಯವಿರಲಿವೆ’ ಎಂದು ವೈದ್ಯಕೀಯ ಕಾಲೇಜಿನ ಡೀನ್ ಡಾ.ಡಿ.ಎಂ.ಸಂಜೀವ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸಾರಿಗೆ ವ್ಯವಸ್ಥೆ ಬೇಕಿದೆ: ಹೊಸ ಆಸ್ಪತ್ರೆಯು ನಗರದಿಂದ ಏಳು ಕಿ.ಮೀ. ದೂರದಲ್ಲಿದೆ. ಸ್ವಂತ ವಾಹನ ಇದ್ದವರಿಗೆ ಅಲ್ಲಿಗೆ ಚಿಕಿತ್ಸೆಗೆ ಹೋಗುವುದಕ್ಕೆ ತೊಂದರೆ ಇಲ್ಲ. ಆದರೆ, ವಾಹನಗಳ ಸೌಕರ್ಯ ಇಲ್ಲದವರು ಬಾಡಿಗೆ ವಾಹನಗಳಲ್ಲಿ ತೆರಳಬೇಕಿದೆ. ಕೆಎಸ್ಆರ್ಟಿಸಿಯು ಯಡಬೆಟ್ಟಕ್ಕೆ ಬಸ್ ಹಾಕುವುದು ಇನ್ನೂ ಖಚಿತವಾಗಿಲ್ಲ.
‘ಸಾರಿಗೆ ಸೌಲಭ್ಯ ಇಲ್ಲದಿದ್ದರೆ, ಆಸ್ಪತ್ರೆಗೆ ಹೋಗಿ ಬರುವುದಕ್ಕೆ ಹೆಚ್ಚು ಹಣ ತೆರಬೇಕಾಗುತ್ತದೆ’ ಎನ್ನುತ್ತಾರೆ ಸಾರ್ವಜನಿಕರು.