ಚಾಮರಾಜನಗರ: ಕೋವಿಡ್ ಹರಡುವಿಕೆ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂವನ್ನು ಇದೇ ತಿಂಗಳ 30ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶ ಹೊರಡಿಸಿದ್ದಾರೆ.
ಈ ಮಧ್ಯೆ, ಕಳೆದ ವಾರಕ್ಕೆ ಹೋಲಿಸಿದರೆ ಈ ಶನಿವಾರ ವಾರಾಂತ್ಯದ ಕರ್ಫ್ಯೂ ನಡುವೆಯೇ ಜನ ಹಾಗೂ ವಾಹನಗಳ ಸಂಚಾರ ಸ್ವಲ್ಪ ಹೆಚ್ಚಾಗಿತ್ತು. ಹಣ್ಣು, ತರಕಾರಿ, ಮಾಂಸ, ಹಾಲು, ದಿನಸಿ ಅಂಗಡಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳು ಮಧ್ಯಾಹ್ನ 2 ಗಂಟೆಯವರೆಗೆ ತೆರೆದಿದ್ದವು.
ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಮದ್ಯದ ಅಂಗಡಿಗಳು ಮಧ್ಯಾಹ್ನ 2 ಗಂಟೆಯವರೆಗೆ ವಹಿವಾಟು ನಡೆಸಿದವು. ಪಾರ್ಸೆಲ್ ಮಾತ್ರ ಲಭ್ಯ ಇತ್ತು. ಹೋಟೆಲ್ ಗಳು ಇಡೀ ದಿನ ತೆರೆದಿದ್ದರೂ ಪಾರ್ಸೆಲ್ ಮಾತ್ರ ಲಭ್ಯವಿತ್ತು.
ಬಸ್ ಸೌಲಭ್ಯ: ಕರ್ಫ್ಯೂ ನಡುವೆ ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಎಂದಿನಂತೆ ಇತ್ತು. ಮಧ್ಯಾಹ್ನದವರೆಗೆ ಪ್ರಯಾಣಿಕರಿದ್ದರು. ಆ ಬಳಿಕ ಹೆಚ್ಚು ಮಂದಿ ಪ್ರಯಾಣಿಸಲಿಲ್ಲ.
ಖಾಸಗಿ ಬಸ್ಗಳು ರಸ್ತೆಗೆ ಇಳಿಯಲಿಲ್ಲ. ಆಟೊಗಳು ಟ್ಯಾಕ್ಸಿಗಳು ಮಧ್ಯಾಹ್ನದವರೆಗೂ ಎಂದಿನಂತೆ ಲಭ್ಯ ಇದ್ದವು. ಜನರ ಹಾಗೂ ಖಾಸಗಿ ಓಡಾಟ ಕಳೆದ ವಾರಕ್ಕಿಂತ ಹೆಚ್ಚಾಗಿತ್ತು. ಅಂಗಡಿಗಳೆಲ್ಲ ಮುಚ್ಚಿದ ಮೇಲೆ ಜನ ಸಂಚಾರ ವಿರಳವಾಯಿತು.