ಸಂತೇಮರಹಳ್ಳಿ: ಮೈಸೂರಿನಲ್ಲಿ ಗಾರೆ ಕೆಲಸ ಮುಗಿಸಿಕೊಂಡು ಕಾರ್ಮಿಕರನ್ನು ಸಂತೇಮರಹಳ್ಳಿ ಕಡೆಗೆ ಕರೆ ತರುತ್ತಿದ್ದ ಪಿಕ್ಅಪ್ ವಾಹನ ಬಾಣಹಳ್ಳಿ ಹಾಗೂ ಕಮರವಾಡಿ ಗೇಟ್ ನಡುವೆ ಶುಕ್ರವಾರ ಸಂಜೆ ಆಯ ತಪ್ಪಿ ಪಲ್ಟಿ ಹೊಡೆದು ಒಬ್ಬರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ.
ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದ ಪ್ರಕಾಶ್ (43) ಮೃತಪಟ್ಟವರು. ಗಾಯಗೊಂಡವರೂ ಹೊನ್ನೂರಿನವರೇ ಆಗಿದ್ದು, ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಎಂಟು ಮಂದಿ ಕಾರ್ಮಿಕರು ಮೈಸೂರಿನಿಂದ ಊರಿಗೆ ಹಿಂದಿರುಗುತ್ತಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ಪ್ರಕಾಶ್ ಹಾಗೂ ಇತರರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಪ್ರಕಾಶ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಸಂತೇಮರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.