ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ದುರಂತ: ಮೈಸೂರಿನಲ್ಲಿ ತನಿಖಾ ಆಯೋಗ ಕಚೇರಿ ತೆರೆದಿರುವುದಕ್ಕೆ ಅಸಮಾಧಾನ

ಆಮ್ಲಜನಕ ದುರಂತ: 15 ದಿನಗಳ ಒಳಗಾಗಿ ದಾಖಲೆ, ಪ್ರಮಾಣ ಪತ್ರ ಸಲ್ಲಿಸಲು ತನಿಖಾ ಆಯೋಗ ಸೂಚನೆ
Last Updated 9 ಜೂನ್ 2021, 13:17 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಮೇ 2ರ ರಾತ್ರಿ ಸಂಭವಿಸಿದ ಆಮ್ಲಜನಕ ದುರಂತ ಪ್ರಕರಣದ ತನಿಖೆಗಾಗಿ ಸರ್ಕಾರ ನೇಮಿಸಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ ನೇತೃತ್ವದ ಏಕ ಸಮಿತಿ ಆಯೋಗದ ಕಚೇರಿಯನ್ನು ಮೈಸೂರಿನಲ್ಲಿ ತೆರೆದಿರುವುದಕ್ಕೆ ಸಂತ್ರಸ್ತರ ಕುಟುಂಬದ ಸದಸ್ಯರು ಹಾಗೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ‌.

ದುರ್ಘಟನೆ ನಡೆದಿರುವುದು ಚಾಮರಾಜನಗರದಲ್ಲಿ, ಮೈಸೂರಿನಲ್ಲಿ ಕಚೇರಿ ತೆರೆದಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ಚಾಮರಾಜನಗರದಲ್ಲೇ ಕಚೇರಿ ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ.

ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿ ಆಯೋಗದ ಕಚೇರಿ ಕೆಲವು ದಿನಗಳ ಕಾರ್ಯಾರಂಭ ಮಾಡಿದೆ.

ಎರಡು ದಿನಗಳ ಹಿಂದೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಆಯೋಗದ ಕಾರ್ಯದರ್ಶಿ ಅವರು, ‘ಪ್ರಕರಣದಲ್ಲಿ ಮರಣಹೊಂದಿರುವ ರೋಗಿಗಳ ವಾರಸುದಾರರು, ಹಿತಾಸಕ್ತಿವುಳ್ಳವರು ಹಾಗೂ ಸಂಸ್ಥೆಗಳು ತಮ್ಮಲ್ಲಿರುವ ದಾಖಲೆಗಳನ್ನು ಪ್ರಮಾಣಪತ್ರದ ಜೊತೆಗೆ ಸಾರ್ವಜನಿಕ ಪ್ರಕಟಣೆ ಪ್ರಕಟವಾದ 15 ದಿನಗಳ ಒಳಗಾಗಿ, ವಿಚಾರಣಾ ಆಯೋಗಕ್ಕೆ ಕಚೇರಿ ಸಮಯದಲ್ಲಿ ಅಥವಾ ನೋಂದಾಯಿತ ಅಂಚೆ (ಡಿಜಿಸ್ಟರ್‌ ಪೋಸ್ಟ್‌) ಮೂಲಕ ದೃಢೀಕೃತ ಪ್ರಮಾಣಪತ್ರದೊಂದಿಗೆ ಸಲ್ಲಿಸಬೇಕು. ಮುಂದೆ ನಿಗದಿಪಡಿಸಿದ‌ದಿನಾಂಕದಂದು ವಿಚಾರಣೆಗೆ ವ್ಯಕ್ತಿಗತವಾಗಿ ಹಾಜರಾಗಬೇಕು’ ಎಂದು ಹೇಳಿದ್ದಾರೆ.

ನಗರದಲ್ಲೇ ಕಚೇರಿ ಬೇಕು:‘ದುರಂತದಲ್ಲಿ ಮೃತಪಟ್ಟ 24 ಮಂದಿಯಲ್ಲಿ ಬಹುತೇಕರು ಗ್ರಾಮೀಣ ಭಾಗದ ಜನರು. ಬಡ ಕುಟುಂಬದವರೇ ಹೆಚ್ಚಾಗಿದ್ದಾರೆ. ಚಾಮರಾಜನಗರಕ್ಕೆ ಅಪರೂಪದಲ್ಲಿ ಬರುವ ಅವರು, ಮೈಸೂರಿಗೆ ಹೋಗಿ ಆಯೋಗಕ್ಕೆ ದಾಖಲೆಗಳನ್ನು ಸಲ್ಲಿಸುವುದು, ನಂತರ ವಿಚಾರಕ್ಕೆ ಹಾಕುವುದಕ್ಕೆ ಪ್ರಯಾಸ ಪಡಬೇಕಾಗುತ್ತದೆ. ಲಾಕ್‌ಡೌನ್‌ ಅವಧಿಯಲ್ಲಿ ಸಾರಿಗೆ ವ್ಯವಸ್ಥೆಯೂ ಸರಿಯಾಗಿಲ್ಲ. ಇಂತಹ ಸಂದರ್ಭದಲ್ಲಿ ಪ್ರಯಾಣ ಮಾಡುವುದೂ ಕಷ್ಟ. ಅಂಚೆ ಮೂಲಕ ದಾಖಲೆಗಳನ್ನು ಈಗ ಕಳುಹಿಸಬಹುದಾದರೂ ವಿಚಾರಣೆ ಸಂದರ್ಭದಲ್ಲಿ ಖುದ್ದಾಗಿ ಹಾಜರಾಗಬೇಕಾಗುತ್ತದೆ. ಚಾಮರಾಜನಗರದಲ್ಲೇ ಕಚೇರಿ ತೆರೆದಿದ್ದರೆ ಅನುಕೂಲವಾಗುತ್ತಿತ್ತು’ ಎಂದು ಮುಖಂಡ ಶ್ರೀನಿವಾಸ ನಾಯಕ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯ ಹನೂರು ಭಾಗದಿಂದ ಚಾಮರಾಜನಗರಕ್ಕೆ ಬರುವುದಕ್ಕೇ 100 ಕಿ.ಮೀ ಇದೆ. ಮೈಸೂರಿಗೆ ಮತ್ತೂ 60 ಕಿ.ಮೀ ಸಾಗಬೇಕು. ಮೈಸೂರಿಗೆ ಹೋಗಬೇಕಲ್ಲ ಎಂದುಕೊಂಡು ಪ್ರಕರಣದ ಬಗ್ಗೆ ಮಾಹಿತಿ ಇರುವವರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ದಾಖಲೆಗಳನ್ನು ಸಲ್ಲಿಸಲು ಹಾಗೂ ವಿಚಾರಣೆಗೆ ಹೋಗದೆ ಇರುವ ಸಾಧ್ಯತೆಯೂ ಇದೆ. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದಿದ್ದರೆ ಚಾಮರಾಜನಗರದಲ್ಲೇ ಆಯೋಗದ ಕಚೇರಿ ಇರಬೇಕು’ ಎಂದು ಅವರು ಒತ್ತಾಯಿಸಿದರು.

ತನಿಖೆ ಹಳ್ಳ ಹಿಡಿಯುವ ಸಾಧ್ಯತೆ: ‘ಮೈಸೂರಿನಲ್ಲಿ ಕಚೇರಿ ತೆರೆಯುವ ಸರ್ಕಾರದ ನಿರ್ಧಾರ ತಪ್ಪು. ಬಹುತೇಕ ಸಂತ್ರಸ್ತರು ಹಳ್ಳಿಯವರು. ಅವರಿಗೆ ಮೈಸೂರಿಗೆ ಓಡಾಡುವುದು ಕಷ್ಟ. ದುರಂತ ನಡೆದು ಈಗಾಗಲೇ ತುಂಬಾ ದಿನಗಳಾಗಿವೆ. ಸಂತ್ರಸ್ತರ ಕುಟುಂಬದವರು, ಪ್ರಕರಣದ ಬಗ್ಗೆ ಮಾಹಿತಿ ಉಳ್ಳವರು, ಇದರ ಬಗ್ಗೆ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ. ನಿರಾಸಕ್ತಿ ಬಂದರೆ ಜನರು ಮೈಸೂರಿಗೆ ಹೋಗುವುದಕ್ಕೆ ಹಿಂದೇಟು ಹಾಕಬಹುದು. ಹೀಗಾದರೆ ಇಡೀ ತನಿಖೆಯೇ ಹಳ್ಳ ಹಿಡಿಯುವ ಸಾಧ್ಯತೆ ಇದೆ’ ಎಂದು ರಂಗಕರ್ಮಿ ಕೆ.ವೆಂಕಟರಾಜು ಅವರು ಕಳವಳ ವ್ಯಕ್ತಪಡಿಸಿದರು.

‘ಇದು ರಾಜಕೀಯ ಷಡ್ಯಂತ್ರ’

ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ, ದುರಂತದಲ್ಲಿ ಮೃತಪಟ್ಟ ಕೊಳ್ಳೇಗಾಲ ತಾಲ್ಲೂಕಿನ ತಿಮ್ಮರಾಜಿಪುರ ಗ್ರಾಮದ ಕೀರ್ತನಾ ಎಂಬ ಯುವತಿಯ ಮಾವ ಸುರೇಶ್‌ ಅವರು, ‘ತನಿಖಾ ಆಯೋಗದ ಕಚೇರಿಯನ್ನು ಉದ್ದೇಶ ಪೂರ್ವಕವಾಗಿ ಮೈಸೂರಿನಲ್ಲಿ ಮಾಡಿದ್ದಾರೆ. ಮೈಸೂರು ನಮಗೆ ಸರಿಯಾಗಿ ಗೊತ್ತಿಲ್ಲ. ಈಗ ಬಸ್ ವ್ಯವಸ್ಥೆಯೂ ಇಲ್ಲ. ಹೀಗಾದರೆ ನಾವು ಏನು ಮಾಡಬೇಕು? ಜಿಲ್ಲೆಯಲ್ಲೇ ತನಿಖಾ ಕಚೇರಿ ತೆರೆದರೆ ಹೋರಾಟ ಮಾಡುತ್ತಾರೆ ಎಂದು ಕಾರಣಕ್ಕೆ ಸಂಚು ರೂಪಿಸಿದ್ದಾರೆ. ಇದು ರಾಜಕೀಯದ ಷಡ್ಯಂತ್ರ. ಈ ದುರಂತಕ್ಕೆ ಕಾರಣರಾದವರನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

‘ನನ್ನ ತಂಗಿ ಗಂಡ ಸಿದ್ದನಾಯಕ ಅವರು ಮೇ 2ರ ರಾತ್ರಿ 11.30ರ ಸುಮಾರಿಗೆ ಮೃತಪಟ್ಟಿದ್ದಾರೆ. ಆದರೆ, ಮೃತಪಟ್ಟವರ ಪಟ್ಟಿಯಲ್ಲಿ ಅವರ ಹೆಸರು ಇಲ್ಲ. ಜಿಲ್ಲಾಧಿಕಾರಿ, ಶಾಸಕರಿಗೆ ಈಗಾಗಲೇ ಮನವಿ ಮಾಡಿದ್ದೇವೆ. ತನಿಖಾ ಆಯೋಗಕ್ಕೂ ಈ ಬಗ್ಗೆ ದೂರು ನೀಡಬೇಕಿದೆ. ಮೈಸೂರಿನಲ್ಲಿ ಕಚೇರಿ ಇರುವುದರಿಂದ ಅಲ್ಲಿಗೆ ಹೋಗಲೇಬೇಕಾಗಿದೆ. ನಗರದಲ್ಲೇ ಇದ್ದಿದ್ದರೆ ನಮಗೆ ಹೆಚ್ಚು ಅನುಕೂಲವಾಗುತ್ತಿತ್ತು’ ಎಂದು, ಅದೇ ದಿನ ಮೃತಪಟ್ಟಿದ್ದ ಬಿಸಿಲ್ವಾಡಿ ಸಿದ್ದನಾಯಕ ಅವರ ಭಾವ ಮಣಿಕಂಠನಾಯಕ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT