ಚಾಮರಾಜನಗರ: ಇಲ್ಲಿನ ನಗರಸಭೆ ವತಿಯಿಂದ ಪೌರಕಾರ್ಮಿಕರ ದಿನವನ್ನು ನಗರದ ಸಿಡಿಎಸ್ ಭವನದ ಆವರಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ‘ನಗರದಲ್ಲಿ ಕಸ ವಿಂಗಡಣೆ ವಿಲೇವಾರಿ, ಗೊಬ್ಬರ ತಯಾರಿಕೆ ನಿರ್ವಹಣೆ ಉತ್ತಮವಾಗಿ ನಡೆಯುತ್ತಿದ್ದು, ಇದಕ್ಕೆ ಪೌರಕಾರ್ಮಿಕರ ಶ್ರಮ ಕಾರಣ’ ಎಂದರು.
‘ಪೌರಕಾರ್ಮಿಕರು ಆರೋಗ್ಯದತ್ತ ಹೆಚ್ಚು ಗಮನ ನೀಡಬೇಕು. ಸರ್ಕಾರದಿಂದ ಪೌರಕಾರ್ಮಿಕರಿಗಾಗಿ ನೀಡಲಾಗುತ್ತಿರುವ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಆಶಾ ಮಾತನಾಡಿ, ‘ಪೌರಕಾರ್ಮಿಕರು ಸಾಕಷ್ಟು ಶ್ರಮವಹಿಸಿ ಸ್ವಚ್ಛತೆಯ ಕೆಲಸ ನಿರ್ವಹಿಸುತ್ತಿದ್ದಾರೆ, ಇದಕ್ಕೆ ಎಲ್ಲ ಸಹಕಾರ ಮುಖ್ಯ’ ಎಂದರು.
ನಗರಸಭಾ ಸದಸ್ಯಮಹೇಶ್ ಮಾತನಾಡಿ, ‘ಪೌರಕಾರ್ಮಿಕರು ಮಕ್ಕಳ ಶಿಕ್ಷಣಕ್ಕೆ ವಿಶೇಷ ಗಮನ ನೀಡಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಪ್ರೋತ್ಸಾಹಿಸಬೇಕು. ಶಿಕ್ಷಣ ಸೌಲಭ್ಯ ಎಲ್ಲರೂ ಪಡೆಯಬೇಕು’ ಎಂದರು. ಮಾಡಿದರು.
ನಗರಸಭಾ ಸದಸ್ಯರಾದ ಕುಮುದ ಮಾತನಾಡಿದರು.
ಇದೇ ವೇಳೆ ಕಸ ವಿಂಗಡಣೆ, ಸ್ವಚ್ಚತಾ ನಿರ್ವಹಣೆ, ಉತ್ತಮ ಹಾಜರಾತಿ ಇರುವ 10 ಪೌರಕಾರ್ಮಿಕರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಕಾಯಂ ಪೌರಕಾರ್ಮಿಕರಿಗೆ ನೀಡಲಾಗುವ ವಿಶೇಷ ಭತ್ಯೆಯನ್ನು ವಿತರಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೆಶಕಿ ಸುಧಾ, ನಗರಸಭೆ ಪ್ರಭಾರ ಆಯುಕ್ತ ನಟರಾಜು, ಪರಿಸರ ಎಂಜಿನಿಯರ್ ಗಿರಿಜಾ ಇತರರು ಇದ್ದರು.