ಚಾಮರಾಜನಗರ: ಪ್ರಸಿದ್ಧ ತೀರ್ಥ ಕ್ಷೇತ್ರ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆಗಾಗಿ ಸಿದ್ಧಪಡಿಸಲಾಗಿದ್ದ ಲಾಡು ಪ್ರಸಾದವನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಸ್ಥಳೀಯರಿಗೆ ಹಾಗೂ ಸುತ್ತ ಮುತ್ತಲ ಗ್ರಾಮಸ್ಥರಿಗೆ ವಿತರಿಸುತ್ತಿದೆ.
ಯುಗಾದಿ ಜಾತ್ರೆಗಾಗಿ 72 ಸಾವಿರ ಲಾಡುಗಳನ್ನು ಸಿದ್ಧಪಡಿಸಲಾಗಿತ್ತು. ಕೊರೊನಾ ವೈರಸ್ ಭೀತಿಯಿಂದ ಜಾತ್ರೆ ರದ್ದಾಗಿರುವುದರಿಂದ ತಯಾರಿಸಿರುವ ಲಾಡುಗಳನ್ನು ಸ್ಥಳೀಯ ಭಕ್ತರಿಗೆ ವಿತರಿಸಲು ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮ್ಮತಿಸಿದ್ದರು.
ಅದರಂತೆ ದೇವಾಲಯಗಳ 550 ಸಿಬ್ಬಂದಿಗೆ ತಲಾ 10 ಲಾಡುಗಳು ಹಾಗೂ ಸ್ಥಳೀಯರಿಗೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ಒಂದೊಂದು ಲಾಡನ್ನು ವಿತರಿಸಲಾಗುತ್ತಿದೆ ಎಂದು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯ ವಿಭವ ಸ್ವಾಮಿ ಅವರು ಹೇಳಿದ್ದಾರೆ.