ಚಾಮರಾಜನಗರ: ವಿದ್ಯುತ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಸೆಸ್ಕ್ ವಿಭಾಗೀಯ ಕಚೇರಿ ಮುಂಭಾಗದಲ್ಲಿ ಸೇರಿದ ಪ್ರತಿಭಟನಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸೆಸ್ಕ್ ಸಹಾಯಕ ಎಂಜಿನಿಯರ್ ರೇಖಾಮಣಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಆಲೂರು ಮಲ್ಲು ಅವರು ಮಾತನಾಡಿ, ‘ರಾಜ್ಯವನ್ನು ಕೋವಿಡ್ ಬಾಧಿಸುತ್ತಿದೆ. ಇದರಿಂದ ಜನಸಾಮಾನ್ಯರು, ರೈತರು, ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಆತಂಕಕ್ಕೀಡಾಗಿ ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಪ್ರತಿ ಯುನಿಟ್ಗೆ 40 ಪೈಸೆ ಏರಿಕೆ ಮಾಡಿ ಜನರ ಮೇಲೆ ಬರೆ ಎಳೆದಿರುವುದು ಖಂಡನೀಯ. ವಿದ್ಯುತ್ ದರ ಏರಿಕೆಯನ್ನು ತಕ್ಷಣ ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.
ರೈತರಿಗೆ ತೊಂದರೆ–ಆರೋಪ: ‘ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಹೋಬಳಿಯ ಬಿಸಲವಾಡಿ ಗ್ರಾಮದ ರೈತರಾದ ಪ್ರಭುಸ್ವಾಮಿ, ಮಹದೇವಪ್ಪ, ಶಿವಣ್ಣ ಇವರ ಜಮೀನುಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಪದೇ ಪದೇ ತೆಗೆಯುವ ಮೂಲಕ ರೈತರಿಗೆ ತೊಂದರೆ ನೀಡಲಾಗುತ್ತಿದೆ. ಇದಕ್ಕೆ ಸೆಸ್ಕ್ ಕಿರಿಯ ಎಂಜಿನಿಯರ್ ಮಹದೇವಸ್ವಾಮಿ ಹಾಗೂ ಲೈನ್ಮ್ಯಾನ್ನ್ ಹಜಾದ್ ಪಾಷ ಅವರು ಕಾರಣರಾಗಿದ್ದು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಸಮಿತಿಯ ಕಾರ್ಯದರ್ಶಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಮಂಜುನಾಥಸ್ವಾಮಿ, ಬಿವಿಎಸ್ ಜಿಲ್ಲಾ ಸಂಯೋಜಕ ಪರ್ವತ್ರಾಜ್, ಸಂಯೋಜಕ ವಾಸು, ಮುಖಂಡರಾದ ಚಿನ್ನಸ್ವಾಮಿ, ಹೊನ್ನಹಳ್ಳಿ ಬಸವಣ್ಣ, ಮಂಜು, ಮಹೇಶ್, ಬಸವಣ್ಣ, ಮಹದೇವಪ್ಪ, ಪ್ರಭುಸ್ವಾಮಿ, ಶಿವಕುಮಾರ್ ಇದ್ದರು.