ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಕುತೂಹಲಕ್ಕೆ ಕಲಿತ ಕಲೆ, ನಾಲ್ಕು ದಶಕಗಳ ಸೇವೆ

ತಟ್ಟೆವಾದ್ಯ ಕಲೆಯ ಪ್ರವೀಣ ಗೋವಿಂದನಾಯ್ಕ, ಬಾಲ್ಯದಲ್ಲೇ ಮೂಡಿದ ಆಸಕ್ತಿ
Last Updated 26 ಮೇ 2020, 17:57 IST
ಅಕ್ಷರ ಗಾತ್ರ

ಹನೂರು: ವಿಶಿಷ್ಟ ಆಚರಣೆ, ಸಂಸ್ಕೃತಿ,ಸಂಪ್ರದಾಯಗಳಿಂದ ಗುರುತಿಸಿಕೊಂಡಿರುವ ಬಂಜಾರ ಸಮುದಾಯದಲ್ಲಿ ತಟ್ಟೆ ವಾದ್ಯ (ಖಾಜಾ-ಭಾಜ) ಕಲೆ ವಿಶಿಷ್ಟ ಜನಪದ ಕಲೆ. ತಾಲ್ಲೂಕಿನ ದೊಮ್ಮನಗದ್ದೆ ಗ್ರಾಮದ ಗೋವಿಂದನಾಯ್ಕ ಅವರು ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ವಿವಿಧೆಡೆ ವಾಸವಾಗಿರುವ ಲಂಬಾಣಿ (ಬಂಜಾರ) ಸಮುದಾಯ ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ತಮ್ಮ ಸಮಾಜದ ಮೂಲ ಸಂಪ್ರದಾಯವನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾಯಿಸುತ್ತಾ ಉಳಿಸಿಕೊಂಡು ಬರುತ್ತಿದ್ದಾರೆ. ಎಷ್ಟೇ ಆಧುನಿಕ ತಂತ್ರಜ್ಞಾನ ಬೆಳೆದರೂ ಕೆಲವು ಹಳ್ಳಿಗಳಲ್ಲಿ ಇವರ ಆಚರಣೆ, ಸಂಸ್ಕೃತಿಗಳು ಇಂದಿಗೂ ಜೀವಂತವಾಗಿವೆ.

ತಾತ ಮುತ್ತಾತರಿಂದ ಕಲಿತ ಕಲೆಯನ್ನು ಇಂದಿನ ತಲೆಮಾರಿಗೂ ಪರಿಚಯಿಸಿಕೊಡುವ ಮೂಲಕ ಸಮುದಾಯದ ಮುಖಂಡರು ತಮ್ಮ ಕಲೆಯನ್ನು ಪೋಷಿಸುತ್ತಾ ಬಂದಿದ್ದಾರೆ. ಇಂಥ ಕಲೆಗಳಲ್ಲಿ ತಟ್ಟೆವಾದ್ಯ ಅತ್ಯಂತ ಮಹತ್ವವಾದುದು. ಲಂಬಾಣಿ ಭಾಷೆಯಲ್ಲಿ ಇದನ್ನು ಖಾಜಾ-ಭಾಜ ಎಂದು ಕರೆಯಲಾಗುತ್ತದೆ.

ಗೋವಿಂದನಾಯ್ಕ ಅವರು ನಾಲ್ಕು ದಶಕಗಳಿಂದ ಈ ಕಲೆಯಲ್ಲಿ ಪರಿ‌ಣತಿ ಸಾಧಿಸಿದ್ದಾರೆ.

‘ಸಮುದಾಯದ ನಾಯಕ ಸಂತ ಸೇವಾಲಾಲ್ ಅವರು ಸಹ ಕಂಚಿನ ತಟ್ಟೆಯನ್ನೇ ಬಳಸಿ ಲಾವಣಿಗಳ ಮೂಲಕ ಜನರನ್ನು ಜಾಗೃತಿಗೊಳಿಸಿದರು. ಅದರ ಪರಂಪರೆಯಾಗಿ ನಾವು ಇಂದಿಗೂ ಕಂಚಿನ ತಟ್ಟೆಯನ್ನು ಬಳಸುತ್ತಾ ಬಂದಿದ್ದೇವೆ. ಬಂಜಾರ ಸಮುದಾಯದ ವಿಶೇಷತೆಗಳಲ್ಲಿ ಖಾಜಾ-ಭಾಜ ಅತ್ಯಮೂಲ್ಯವಾದುದು. ಹಿರಿಯರಿಂದ ಬಳುವಳಿಯಾಗಿ ಬಂದ .ಕಲೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದೇವೆ’ ಎಂದು ಗೋವಿಂದನಾಯ್ಕ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಲ್ಯದಿಂದಲೇ ಆಸಕ್ತಿ:ಗ್ರಾಮದಲ್ಲಿ ತಂದೆಯ ಸ್ನೇಹಿತ ಪಿರಿಯನಾಯ್ಕ ಅವರು ಪ್ರದರ್ಶಿಸುತ್ತಿದ್ದ ಕಲೆಯ ಬಗ್ಗೆ ಆಸಕ್ತಿ ಬೆಳೆದು ಬಾಲ್ಯದಿಂದಲೇ ಈ ಕಲೆಯನ್ನು ಕರಗತ ಮಾಡಿಕೊಂಡಿರುವ ಇವರು, ‌ಶಾಲೆಗೆ ಹೋಗಿದ್ದು ಒಂದನೇ ತರಗತಿ ಮಾತ್ರ. ಸದ್ಯ ಗೋವಿಂದನಾಯ್ಕ ಅವರು ‌ಗ್ರಾಮದ 8 ಜನರಿಗೆ ತಟ್ಟೆವಾದ್ಯವನ್ನು ಕಲಿಸುತ್ತಿದ್ದಾರೆ. ಈ ಪೈಕಿ ಮೂವರು ಯುವಕರು.

ಇವರಲ್ಲಿರುವ ಕಲೆಯನ್ನು ತಾಂಡಾಭಿವೃದ್ಧಿ ನಿಗಮ ಗುರುತಿಸಿದೆ. 2018-19ರಲ್ಲಿ ಕೊಪ್ಪಳದಲ್ಲಿ ನಡೆದ ಬಂಜಾರ ಕಲಾ ಮೇಳದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಏನಿದು ತಟ್ಟೆ ವಾದ್ಯ?

ವಿವಿಧ ಸಮುದಾಯಗಳ ಜನರು ತಮ್ಮ ಸಮುದಾಯದ ಕಲೆಗಳನ್ನು ಪ್ರದರ್ಶಿಸಲು ಕೆಲವು ಪರಿಕರಗಳನ್ನು ಬಳಸುತ್ತಾರೆ. ಅದೇ ರೀತಿ, ಲಂಬಾಣಿ ಸಮುದಾಯದಲ್ಲಿ ಕಲೆಯನ್ನು ಪ್ರದರ್ಶಿಸಲು ಕಂಚಿನ ತಟ್ಟೆಯನ್ನು ಬಳಸಲಾಗುತ್ತದೆ. ಕತೆ ಹೇಳುವುದು, ಹಾಡುಗಾರಿಕೆ, ಲಾವಣಿ, ತತ್ವಪದ ಗಳನ್ನು ಹೇಳುವಾಗ ಕಂಚಿನ ತಟ್ಟೆಯನ್ನು ಕಲಾವಿದರು ಬಳಸುತ್ತಾರೆ.

‘ತಾಲ್ಲೂಕಿನ ದಿನ್ನಳ್ಳಿ, ದೊಮ್ಮನಗದ್ದೆ, ಮಾರ್ಟಳ್ಳಿ, ನಾಲರೋಡ್, ಕೋಟೆಪೋದೆ, ಪಿ.ಜಿ.ಪಾಳ್ಯ, ಮಹಾಲಿಂಗನಕಟ್ಟೆ, ಜಾಗೇರಿ, ಕೆ.ಗುಂಡಾಪುರ ಮುಂತಾದ ಕಡೆಗಳಲ್ಲಿ ವಾಸವಿರುವ ನಮ್ಮ ಸಮುದಾಯದ ಜನ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ಅವರು ಕೊಡುವ ಅಲ್ಪ ಹಣವನ್ನೇ ಎಲ್ಲರೂ ಹಂಚಿಕೊಳ್ಳುತ್ತೇವೆ’ ಎಂದು ಗೋವಿಂದ ನಾಯ್ಕ ಹೇಳಿದರು.

ಕುತೂಹಲಕ್ಕೆ ಕಲಿತೆ: ‘ತಟ್ಟೆವಾದ್ಯ ಕಲೆ ಬದುಕು ನಡೆಸಲಿಕ್ಕಾಗಿ ಕಲಿತ ಕಲೆಯಲ್ಲ; ಕುತೂಹಲಕ್ಕಾಗಿ ಕಲಿತ ಕಲೆ. ಸಮುದಾಯದ ಕಲೆಯನ್ನು ಉಳಿಸಿ ಪೋಷಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದುಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT