ಚಾಮರಾಜನಗರ: ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಬಾಯ್ತೆರೆದುಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಮ್ಯಾನ್ಹೋಲ್ಗಳನ್ನು ಹೊಸ ಮುಚ್ಚಳ ಹಾಕಿ ಮುಚ್ಚಲಾಗಿದೆ.
‘ಪ್ರಜಾವಾಣಿ’ಯ ಸೆ.23ರ(ಸೋಮವಾರ) ಸಂಚಿಕೆಯಲ್ಲಿ ‘ನಮ್ಮ ನಗರ ನಮ್ಮ ಧ್ವನಿ’ ಅಂಕಣದಲ್ಲಿ ‘ಎಚ್ಚರ! ಬಲಿಗೆ ಬಾಯ್ತೆರೆದಿವೆ ಮ್ಯಾನ್ಹೋಲ್ಗಳು’ ಎಂಬ ವಿಶೇಷ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿರುವ ಜಿಲ್ಲಾಡಳಿತ ಮತ್ತು ನಗರಸಭೆ ಹೊಸ ಮುಚ್ಚಳ ಅಳವಡಿಸಲು ಕ್ರಮ ಕೈಗೊಂಡಿವೆ.
ಸಂಪಿಗೆ ರಸ್ತೆ, ದೊಡ್ಡ ಅಂಗಡಿ ಬೀದಿಗಳಲ್ಲಿ ಮುಚ್ಚಳ ಹಾಳಾಗಿದ್ದ ಮ್ಯಾನ್ಹೋಲ್ಗಳಿಗೆ ಸಿಬ್ಬಂದಿ ಗುರುವಾರ ಹೊಸ ಮುಚ್ಚಳಗಳನ್ನು ಅಳಡಿಸುತ್ತಿದ್ದುದು ಕಂಡು ಬಂತು.
ಈ ಸಮಸ್ಯೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ್ದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು, ತಕ್ಷಣವೇ ಮ್ಯಾನ್ಹೋಲ್ಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಅದರಂತೆ ವರದಿ ಪ್ರಕಟಗೊಂಡ ಮೂರು ದಿನಗಳಲ್ಲಿ ಕ್ರಮ ತೆಗೆದುಕೊಂಡಿದ್ದಾರೆ.