ಚಾಮರಾಜನಗರ: ತಾಲ್ಲೂಕಿನ ಹೆಬ್ಬಸೂರು ಗ್ರಾಮಕ್ಕೆಮಂಗಳವಾರದಿಂದ ಕೆಎಸ್ಆರ್ಟಿಸಿ ಬಸ್ ಸೇವೆ ಆರಂಭವಾಗಿದೆ.
ಕೋವಿಡ್ ಹಾವಳಿ ಆರಂಭಗೊಂಡ ನಂತರ ಗ್ರಾಮಕ್ಕೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಬರುತ್ತಿದ್ದ ಬಸ್ ಸೇವೆಯನ್ನು ನಿಲ್ಲಿಸಲಾಗಿತ್ತು. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದರು. ವಿದ್ಯಾರ್ಥಿಗಳು ಬಸ್ಗಾಗಿ ಹೆಬ್ಬಸೂರಿನಿಂದ ಐದು ಕಿ.ಮೀ ನಡೆದು ಚಂದಕವಾಡಿಗೆ ಬರಬೇಕಿತ್ತು.
ವಿದ್ಯಾರ್ಥಿಗಳು ಎದುರಿಸುತ್ತಿರುವ ಕಷ್ಟಗಳ ಕುರಿತು ‘ಪ್ರಜಾವಾಣಿ’ಯ ಡಿ.5ರ ಸಂಚಿಕೆಯಲ್ಲಿ ‘ಬಸ್ಗಾಗಿ 5 ಕಿ.ಮೀ ನಡಿಗೆ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.
ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು, ‘ಗ್ರಾಮಸ್ಥರು ಮನವಿ ಸಲ್ಲಿಸಿದರೆ, ಬಸ್ ಸೌಲಭ್ಯ ಒದಗಿಸಲಾಗುವುದು’ ಭರವಸೆ ನೀಡಿದ್ದರು.
ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಗ್ರಾಮಕ್ಕೆ ಬಸ್ ಬಂದಿದ್ದು, ವಿದ್ಯಾರ್ಥಿಗಳು ಗ್ರಾಮದಿಂದಲೇ ಬಸ್ನಲ್ಲಿ ನಗರಕ್ಕೆ ಪ್ರಯಾಣಿಸಿದರು.