ಚಾಮರಾಜನಗರ: ‘ಯಾರೊಬ್ಬರೂ ಬಂಧನವನ್ನು ಬಯಸುವುದಿಲ್ಲ. ಆದರೆ, ರಕ್ಷಾ ಬಂಧನವು ಆಧ್ಯಾತ್ಮಿಕ, ವಿಶ್ವ ಭ್ರಾತೃತ್ವ, ಸ್ನೇಹ ಸೂಚಕ ಹಾಗೂ ಆತ್ಮ ಸುರಕ್ಷತೆಯ ಬಂಧನವಾಗಿದೆ’ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಿಲ್ಲಾ ಸಂಚಾಲಕಿ ದಾನೇಶ್ವರಿ ಅವರು ಗುರುವಾರ ಹೇಳಿದರು.
ನಗರದ ಪ್ರಕಾಶ ಭವನದಲ್ಲಿ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾವು ಬರೀ ದೇಹವಲ್ಲ. ಆತ್ಮಗಳು. ಪರಮಾತ್ಮನ ಮಕ್ಕಳು. ಪರಸ್ಪರರಲ್ಲಿ ಸಹೋದರ ಸಹೋದರಿಯರು ಎಂಭ ಭಾವನೆಯನ್ನು ಮೂಡಿಸುವುದು ರಕ್ಷಾ ಬಂಧನದ ಆಧ್ಯಾತ್ಮಿಕ ರಹಸ್ಯವಾಗಿದೆ’ ಎಂದು ಅಭಿಪ್ರಾಯ ಪಟ್ಟರು.
ರಕ್ಷಾ ಬಂಧನದ ಅಂಗವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಪರಸ್ಪರ ರಕ್ಷೆಗಳನ್ನು ಕಟ್ಟಿದರು. ಎಲ್ಲರಿಗೂ ಸಿಹಿ ವಿತರಿಸಲಾಯಿತು.
ನಾರಾಯಣ ಶೆಟ್ಟಿ, ಪುಟ್ಟಶೇಖರಮೂರ್ತಿ, ಪ್ರಭಾಕರ್, ಗೋವಿಂದರಾಜು, ಆಶಾ, ಓಂ ಶಾಂತಿ ನ್ಯೂಸ್ ಸರ್ವೀಸ್ನ ಬಿ.ಕೆ.ಆರಾಧ್ಯ, ರಾಜಕ್ಕ, ಗೀತಾ, ಆಶಾ, ಗುರುಸಿದ್ದಯ್ಯ, ಲಕ್ಷ್ಮಮ್ಮ, ನಿರ್ಮಲ, ಪ್ರೀತಿ, ವಿಶ್ವಾಸ ಇತರರು ಇದ್ದರು.