ಚಾಮರಾಜನಗರ: ಕಂಕಣ ಸೂರ್ಯಗ್ರಹಣ ಸಂಭವಿಸಲಿರುವ ಗುರುವಾರದಂದು (ಡಿ.26) ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಎಂದಿನಂತೆ ದರ್ಶನ ಇರಲಿದೆ ಎಂದು ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹೇಳಿದೆ.
‘ಅದೇ ದಿನ ಅಮವಾಸ್ಯೆ ಆಗಿರುವುದರಿಂದ ನಸುಕಿನ 4ರಿಂದ ಬೆಳಿಗ್ಗೆ 6 ಗಂಟೆಯ ಒಳಗಾಗಿ ಪೂಜೆ ನೆರವೇರಲಿದೆ. ನಂತರ ಎಂದಿನಂತೆ ದರ್ಶನ ಪಡೆಯಬಹುದು’ ಎಂದು ದೇವಾಲಯದ ಅರ್ಚಕ ಕರವೀರ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗ್ರಹಣದ ನಂತರ ಸಂಜೆ ಸಂಜೆ 4ರಿಂದ ರಾತ್ರಿ 7ರ ವರೆಗೆ ವಿಶೇಷ ಪೂಜೆಗೆ ತಯಾರಿಗಾಗಿ ಗೇಟುಗಳನ್ನು ಮುಚ್ಚಲಾಗುವುದು. ಹಾಗಾಗಿ ಅಭಿಷೇಕದ ವೇಳೆ ಹಾಗೂ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿದೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾಸೋಹದ ಸಮಯದಲ್ಲೂ ಬದಲಾವಣೆ ಇಲ್ಲ. ಪ್ರತಿದಿನದಂತೆ ನಿರಂತರ ದಾಸೋಹ ಇರಲಿದೆ ಎಂದೂ ಅವರು ಹೇಳಿದ್ದಾರೆ.