ರಾಜ್ಕೋಟ್: ವಿಶ್ವಕಪ್ ಟೂರ್ನಿಗೂ ಮುನ್ನ ತನ್ನ ಪಾಲಿನ ಕೊನೆಯ ಏಕದಿನ ಪಂದ್ಯ ಆಡಲು ಭಾರತ ತಂಡ ಸಿದ್ಧವಾಗಿದೆ.
ಪ್ರವಾಸಿ ಆಸ್ಟ್ರೇಲಿಯಾ ಎದುರು ಬುಧವಾರ ಕಣಕ್ಕಿಳಿಯಲಿದೆ. ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭಾರತ ಜಯಿಸಿದೆ. ಇದೀಗ ಆಸ್ಟ್ರೇಲಿಯಾದ ಎದುರು ಚಾರಿತ್ರಿಕ 3–0 ಸರಣಿ ಜಯ ಸಾಧಿಸುವ ತವಕದಲ್ಲಿದೆ.
ಎರಡೂ ಪಂದ್ಯಗಳಲ್ಲಿ ಭಾರತ ತಂಡವನ್ನು ಕನ್ನಡಿಗ ಕೆ.ಎಲ್. ರಾಹುಲ್ ಮುನ್ನಡೆಸಿದ್ದರು. ಆಗ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸ್ಪಿನ್ನರ್ ಕುಲದೀಪ್ ಯಾದವ್ ಅವರು ತಂಡಕ್ಕೆ ಮರಳಿದ್ದಾರೆ. ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತ.
ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಅವರು ತಲಾ ಒಂದು ಶತಕ ಹೊಡೆದು ಮಿಂಚಿದ್ದರು. ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್ ಅವರೂ ಅಬ್ಬರಿಸಿದ್ದರು. ಎರಡೂ ಪಂದ್ಯಗಳಲ್ಲಿ ಆಡಿದ್ದ ಋತುರಾಜ್ ಗಾಯಕವಾಡ್ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಆಡಲು ಚೀನಾಕ್ಕೆ ತೆರಳುವರು. ಆದ್ದರಿಂದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಗಿಲ್ ಜೊತೆಗೆ ಇನಿಂಗ್ಸ್ ಆರಂಭಿಸುವರು. ವಿರಾಟ್ ಕೊಹ್ಲಿಗಾಗಿ ಶ್ರೇಯಸ್ ಸ್ಥಾನ ಬಿಟ್ಟುಕೊಡಬೇಕಾಗಬಹುದು. ಹಾರ್ದಿಕ್ ಪಾಂಡ್ಯಗಾಗಿ ಶಾರ್ದೂಲ್ ಠಾಕೂರ್ ಬೆಂಚ್ ಸೇರಬಹುದು.
ಅದ್ಭುತ ಲಯದಲ್ಲಿರುವ ಮೊಹಮ್ಮದ್ ಶಮಿ ಅವರೊಂದಿಗೆ ಜಸ್ಪ್ರೀತ್ ಬೂಮ್ರಾ ಬೌಲಿಂಗ್ ವಿಭಾಗವನ್ನು ಮುನ್ನಡೆಸುವುದು ಖಚಿತ. ಕುಲದೀಪ್ ಯಾದವ್ ಅವರಿಗಾಗಿ ಅಶ್ವಿನ್ ಅಥವಾ ರವೀಂದ್ರ ಜಡೇಜ ಅವರಲ್ಲೊಬ್ಬರು ವಿಶ್ರಾಂತಿ ಪಡೆಯಬಹುದು. ವಿಶ್ವಕಪ್ ಟೂರ್ನಿಯಲ್ಲಿ ಅಕ್ಟೋಬರ್ 8ರಂದು ಭಾರತವು ಆಸ್ಟ್ರೇಲಿಯಾ ಎದುರು ಆಡುವುದರ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯದಲ್ಲಿ ಆಡಲಿರುವ ಅಂತಿಮ ತಂಡವನ್ನು ನಿರ್ಧರಿಸಲು ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ರಾಜ್ಕೋಟ್ ಪಂದ್ಯ ಕೊನೆಯ ಅವಕಾಶವಾಗಲಿದೆ.
ದಕ್ಷಿಣ ಆಫ್ರಿಕಾದಲ್ಲಿ ಸೋತ ನಂತರ ಭಾರತಕ್ಕೆ ಬಂದ ಪ್ಯಾಟ್ ಕಮಿನ್ಸ್ ಬಳಗವು ಸತತ ನಿರಾಶೆ ಅನುಭವಿಸಿದೆ. ವಿಶ್ವಕಪ್ ಟೂರ್ನಿಗೆ ಸಾಗುವ ಮುನ್ನ ಸಮಾಧಾನಕರ ಜಯ ಸಾಧಿಸಿ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 1.30
ನೇರಪ್ರಸಾರ:
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.