ಕೊಳ್ಳೇಗಾಲ: ತಾಲ್ಲೂಕಿನ ಮಧುವನ ಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಗಳು ಮೃತಪಟ್ಟಿದ್ದಾರೆ. ತಾಯಿ ಹಾಗೂ ಮಗ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಸಿಂಧು (9) ಮೃತಪಟ್ಟ ಬಾಲಕಿ. ಆಕೆಯ ತಾಯಿ ಶೀಲಾ (30), ಹಾಗೂ ತಮ್ಮ ಯಶವಂತ್ (8) ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೀಲಾ ಅವರ ಪತಿ ಷಣ್ಮುಗ ಸ್ವಾಮಿ ಮದ್ಯ ವ್ಯಸನಿಯಾಗಿದ್ದು, ಪ್ರತಿ ದಿನ ಮನೆಯಲ್ಲಿ ಜಗಳವಾಡುತ್ತಿದ್ದರು.
ಮಂಗಳವಾರ ರಾತ್ರಿ ಷಣ್ಮುಗ ಸ್ವಾಮಿ ಕುಡಿದು ಬಂದು ಶೀಲಾ ಹಾಗೂ ಮಕ್ಕಳಿಗೆ ಹೊಡೆದು ಚಿತ್ರಹಿಂಸೆ ನೀಡಿದ್ದರು. ಇದರಿಂದ ಬೇಸತ್ತ ಶೀಲಾ ಬುಧವಾರ ಬೆಳಿಗ್ಗೆ ಮಕ್ಕಳಿಗೆ ವಿಷ ಕೂಡಿಸಿ ತಾನೂ ವಿಷ ಸೇವಿಸಿದ್ದಾಳೆ. ವಿಷ ಕುಡಿದು ಮಕ್ಕಳು ಹಾಗೂ ಶೀಲಾ ನರಳುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅವರನ್ನು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಕರೆದೊಯ್ದರು. ಆದರೆ ಸಿಂಧು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತಾಯಿ ಹಾಗೂ ಮಗ ಯಶವಂತ್ ಸ್ಥಿತಿ ಗಂಭೀರವಾಗಿದೆ. ತಕ್ಷಣವೇ ಈ ಇಬ್ಬರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಯಿತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.