ಗುಂಡ್ಲುಪೇಟೆ: ತಾಲ್ಲೂಕಿನ ಗೋಪಾಲಪುರ ಗ್ರಾಮದ ಕಬ್ಬಿಣ ಕೋಲೇಶ್ವರ ಮಠದ ಕಿರಿಯ ಮಠಾಧೀಶ ಇಮ್ಮಡಿ ಗುರುಮಲ್ಲ ಸ್ವಾಮೀಜಿ (42) ಅವರು ಶನಿವಾರ ಹಾವು ಕಚ್ಚಿ ಮೃತಪಟ್ಟಿದ್ದಾರೆ.
ಮಠದ ಜಮೀನಿನಲ್ಲಿ ಶನಿವಾರ ಬೆಳಿಗ್ಗೆ ಕೃಷಿ ಕಾರ್ಮಿಕರೊಂದಿಗೆ ಕಳೆ ಕೀಳುತ್ತಿದ್ದಾಗ ಕಾಲಿಗೆ ಹಾವು ಕಚ್ಚಿದೆ. ತಕ್ಷಣವೇ, ಚಿಕಿತ್ಸೆಗೆ ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲು ಮಾಡಿ, ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ, ದಾರಿ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ.
‘ಸ್ವಾಮೀಜಿ ಅವರಿಗೆ ಆರಂಭದಲ್ಲಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಪರಿಸ್ಥಿತಿ ಗಂಭೀರವಾಗಿದ್ದರಿಂದ ಅಲ್ಲಿನ ವೈದ್ಯರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ನಮ್ಮಲ್ಲಿಗೆ ಬರುವಾಗ ಅವರು ಮೃತಪಟ್ಟಿದ್ದರು’ ಎಂದು ಜಿಲ್ಲಾಸ್ಪತ್ರೆಯ (ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆ) ಸ್ಥಾನಿಕ ವೈದ್ಯಾಧಿಕಾರಿ ಡಾ.ಕೃಷ್ಣಪ್ರಸಾದ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಮೂಲತಃ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸೂರಹಳ್ಳಿ ಗ್ರಾಮದವರಾದ ಶ್ರೀಗಳ ಅಂತ್ಯಕ್ರಿಯೆ ಗೋಪಾಲಪುರದ ಮಠದ ಬಳಿ ಭಾನುವಾರ ನಡೆಯಲಿದೆ. ವಿವಿಧ ಮಠಾಧೀಶರು ಅಂತಿಮದರ್ಶನಕ್ಕೆ ಬರುವ ನಿರೀಕ್ಷೆ ಇದೆ.