ಚಾಮರಾಜನಗರ: ‘ಟಿಪ್ಪು ಸುಲ್ತಾನ್ ಮಹಾ ಸೇನಾನಿ. ಟಿಪ್ಪು ಹಿಂದೂ ವಿರೋಧಿ ಆಗಿದ್ದರೆ ಹಿಂದೂಗಳ ದೇವಸ್ಥಾನಗಳಿಗೆ ಕೊಡುಗೆ ನೀಡುತ್ತಿದ್ದರಾ? ಅವರು ಧರ್ಮಾಂಧರಾಗಿರಲಿಲ್ಲ. ಅವರ ಇತಿಹಾಸವನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಭಾನುವಾರ ಹೇಳಿದರು.
ನಗರದ ಗಾಳಿಪುರ ಬಡಾವಣೆಯಲ್ಲಿ ಟಿಪ್ಪು ವೆಲ್ಫೇರ್ ಅಸೋಸಿಯೇಷನ್ ಹಮ್ಮಿಕೊಂಡಿದ್ದಟಿಪ್ಪು ಸಲ್ತಾನ್ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಟಿಪ್ಪು ಚರಿತ್ರೆ ಕನ್ನಡಿಗರ ಮನಮುಟ್ಟುವಂತಹದ್ದು. ಜನರಿಗೆ ಅನುಕೂಲವಾಗಿರುವ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದು ರಾಜ್ಯದ ಅಭಿವೃದ್ಧಿ. ರಾಜಕೀಯ ಬೇಳೆ ಬೇಯಿಸುವುದಕ್ಕಾಗಿ ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ. ಚರಿತ್ರೆ ತಿದ್ದುಪಡಿ ಮಾಡಲು ಹೊರಟವರು ಮುಂದೊಂದು ದಿನ ಖಂಡಿತವಾಗಿಯೂ ಅನುಭವಿಸುತ್ತಾರೆ’ ಎಂದರು.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷವಾಟಾಳ್ ನಾಗರಾಜ್ ಮಾತನಾಡಿ, ‘ನಮ್ಮ ರಾಜ್ಯದಲ್ಲಿ ಟಿಪ್ಪು ಹುಟ್ಟಿದ್ದೇ ಈ ನಾಡಿಗೆ ಗೌರವ ತರುವ ವಿಷಯ. ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಟ್ಟಿದ್ದ ಅವರು ದೇಶ ಕಂಡ ಅತ್ಯಂತ ಎತ್ತರದ ವ್ಯಕ್ತಿ’ ಎಂದು ತಿಳಿಸಿದರು.
‘ಟಿಪ್ಪು ಸುಲ್ತಾನ್ ಬಗ್ಗೆ ಅಪಪ್ರಚಾರ ಒಳ್ಳೆಯದಲ್ಲ. ಅಪಪ್ರಚಾರ ಮಾಡುವುದನ್ನು ಕೆಲವರು ಕಸುಬು ಮಾಡಿಕೊಂಡಿದ್ದಾರೆ. ಗಾಂಧಿ ಕೊಂದಂತಹ ಜನರನ್ನು ವೈಭವೀಕರಣ ಮಾಡುತ್ತೇವೆ. ದೇಶಕ್ಕಾಗಿ ಹೋರಾಟ ಮಾಡಿದ ಟಿಪ್ಪು ಬಗ್ಗೆ ಅಪಪ್ರಚಾರ ಮಾಡುತ್ತೇವೆ’ ಎಂದು ವ್ಯಂಗ್ಯವಾಡಿದರು.
ಎಸ್ಡಿಪಿಐ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ‘ರಾಜರ ಚರಿತ್ರೆಯಲ್ಲಿ ರಣರಂಗದಲ್ಲಿ ಪ್ರಾಣ ಬಿಟ್ಟಹಾಗೂ ತಮ್ಮ ಮಕ್ಕಳನ್ನು ಒತ್ತೆ ಇಟ್ಟ ಉದಾರಹಣೆ ಯಾರಾದರೂ ಇದ್ದರೆ ಅದು ಟಿಪ್ಪು ಸುಲ್ತಾನ್ ಮಾತ್ರ. ಇಂತಹ ವ್ಯಕ್ತಿ ಬಗ್ಗೆ ಕೋಮುವಾದಿ ಶಕ್ತಿಗಳು ಅಪಪ್ರಚಾರ ಮಾಡುತ್ತಿವೆ. ಅಂತಹವರು ಹೇಡಿಗಳು. ಚರಿತ್ರೆಗೆ ಅಪಪ್ರಚಾರ ಮಾಡಿ ಏನೂ ಸಾಧಿಸಲು ಸಾಧ್ಯವಿಲ್ಲ. ರಾಜಕಾರಣಕ್ಕಾಗಿ ಚರಿತ್ರೆಯನ್ನು ತಪ್ಪಾಗಿ ಹೇಳುತ್ತಿದ್ದಾರೆ’ ಎಂದು ತಿಳಿಸಿದರು.
ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಪ್ರಾಧ್ಯಾಪಕ ಹ.ರಾ.ಮಹೇಶ್ ಅವರು ಟಿಪ್ಪು ಸುಲ್ತಾನ್ ಹಾಗೂ ಸಂವಿಧಾನದ ಕುರಿತು ಮಾತನಾಡಿದರು.
ನಗರಸಭಾ ಸದಸ್ಯ ಅಫ್ಸರ್ ಪಾಚಾ, ಮುಖಂಡರಾದ ಸೈಯದ್ ರಫಿ, ಜಬೀವುಲ್ಲಾ, ಇರ್ಷಾದುಲ್ಲ ವಸೀಂ ಪಾಷಾ, ಅಮ್ಜದ್ ಖಾನ್ ಸಿದ್ದಿಕ್, ಖಲೀಲ್ ಅಸ್ಲಾಂ ಪಾಷಾ, ಜಮಾನ್ ಖಾನ್, ಇತರರು ಇದ್ದರು.