ಚಾಮರಾಜನಗರ: ಮಾರುಕಟ್ಟೆಯಲ್ಲಿ ಈ ವಾರ ಹಲವು ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ಟೊಮೆಟೊ ಬೆಲೆ ಇಳಿದಿದೆ.
ಹಾಪ್ಕಾಮ್ಸ್ನಲ್ಲಿ ಬೀನ್ಸ್ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಸೋಮವಾರ ಮಾರುಕಟ್ಟೆಗೆ ಬೀನ್ಸ್ ಬಂದಿಲ್ಲ ಎಂದು ಹೇಳುತ್ತಾರೆ ವ್ಯಾಪಾರಿಗಳು. ಹಾಪ್ಕಾಮ್ಸ್ನಲ್ಲಿ ಕೆಜಿ ಬೀನ್ಸ್ಗೆ ₹70ರಿಂದ ₹80 ಬೆಲೆ ಇತ್ತು. ಕಳೆದ ವಾರ ಕೆಜಿಗೆ ₹40 ಇತ್ತು.
ಮಳೆ ಕಡಿಮೆಯಾಗಿರುವುದರಿಂದ ಟೊಮೆಟೊ ಬೆಳೆ ಚೆನ್ನಾಗಿದ್ದು, ಮಾರುಕಟ್ಟೆಗೆ ಹೆಚ್ಚು ಆವಕವಾಗುತ್ತಿದೆ. ಆದ್ದರಿಂದ ಬೆಲೆಯೂ ಇಳಿದಿದೆ. ಕಳೆದ ವಾರ ₹50 ಇದ್ದ ಟೊಮೆಟೊ ಧಾರಣೆ ಈ ವಾರ ₹20 ಕಡಿಮೆಯಾಗಿ, ₹30ಕ್ಕೆ ತಲುಪಿದೆ.
ಬೆಳ್ಳುಳ್ಳಿ ಕೆಜಿಗೆ ₹20 ಹೆಚ್ಚಾಗಿ ₹60 ಆಗಿದೆ. ಉಳಿದವುಗಳ ಬೆಲೆ ₹10 ಏರಿಕೆಯಾಗಿದೆ.
ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕೆಜಿಗೆ ₹80 ಇದ್ದ ದ್ರಾಕ್ಷಿ ಈಗ ₹100 ಆಗಿದೆ. ಸೇಬು (₹180), ಕಿತ್ತಳೆ (₹120), ದಾಳಿಂಬೆ (₹160), ಕಲ್ಲಂಗಡಿಗಳ (₹20) ಬೆಲೆ ಸ್ಥಿರವಾಗಿದೆ.
ಬಾಳೆಹಣ್ಣುಗಳಿಗೆ ಬೇಡಿಕೆಯಿದ್ದು, ಬೆಲೆ ಇಳಿದಿಲ್ಲ. ಚಂದ್ರ ಬಾಳೆಯೂ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಕೆಜಿಗೆ ₹40 ಇದೆ. ಪಚ್ಚಬಾಳೆ ಆವಕ ಕಡಿಮೆಯಾಗಿರುವುದರಿಂದ ಬೆಲೆಯೂ ಹೆಚ್ಚಿದೆ. ಅದಕ್ಕೂ ಕೆಜಿಗೆ ₹40 ಕೊಡಬೇಕು.
ಮಾಂಸ ಚಿಲ್ಲರೆ ಮಾರುಕಟ್ಟೆಯಲ್ಲಿ ಮೊಟ್ಟೆ (ಒಂದಕ್ಕೆ ₹6), ಚಿಕನ್ (₹230) ಹಾಗೂ ಮಟನ್ (₹560) ಬೆಲೆ ಯಥಾಸ್ಥಿತಿ ಮುಂದುವರಿದಿದೆ.
ಹೂವುಗಳಿಗೆ ಬೇಡಿಕೆ: ಎರಡು ವಾರಗಳಿಂದ ಹೂವುಗಳಿಗೆ ಬೇಡಿಕೆ ಕಡಿಮೆ ಇತ್ತು. ಮಂಗಳವಾರ ಅಮಾವಾಸ್ಯೆ ಇರುವುದರಿಂದ ಕನಕಾಂಬರ ಬಿಟ್ಟು ಎಲ್ಲ ಹೂವುಗಳಿಗೂ ಬೇಡಿಕೆ ಇದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ಸೋಮವಾರ ಬೆಲೆಯೂ ಜಾಸ್ತಿಯಾಗಿದೆ.
ಕನಕಾಂಬರಕ್ಕೆ ಹೆಚ್ಚಿನ ಬೇಡಿಕೆ ಇಲ್ಲ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕೆಜಿಗೆ ₹500 ಇದೆ.
‘ಅಮಾವಾಸ್ಯೆ ಇರುವುದರಿಂದ ಕನಕಾಂಬರ ಬಿಟ್ಟು ಉಳಿದ ಹೂವುಗಳಿಗೆ ಬೇಡಿಕೆ ಇದೆ. ಕಾಕಡ ಕೆಜಿಗೆ ₹160, ಮರ್ಲೆಗೆ ₹200, ಸೇವಂತಿಗೆ ಹೂವಿಗೆ %₹160, ಚೆಂಡುಹೂವಿಗೆ ₹30ರಿಂದ ₹40 ಇದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ತಿಳಿಸಿದರು.