ಚಾಮರಾಜನಗರ: ತಾಲ್ಲೂಕಿನ ಕಟ್ನವಾಡಿಯ ಕಬ್ಬಿನ ಗದ್ದೆಯೊಂದರಲ್ಲಿಭಾನುವಾರ ಎರಡು ಚಿರತೆಮರಿಗಳು ಪತ್ತೆಯಾಗಿವೆ.
ಗ್ರಾಮದ ಗುರು ಎಂಬುವವರ ಜಮೀನಿನಲ್ಲಿಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಚಿರತೆ ಮರಿಗಳು ಸಿಕ್ಕಿವೆ. ಎರಡೂ ಹೆಣ್ಣಾಗಿದ್ದು, ಹುಟ್ಟಿ 15ರಿಂದ 20 ದಿನಗಳು ಆಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಮರಿಗಳು ಕಂಡು ಬಂದ ತಕ್ಷಣ ಗ್ರಾಮಸ್ಥರು ಚಾಮರಾಜನಗರ ವಲಯ ಅರಣ್ಯ ಸಿಬ್ಬಂದಿಗೆ ತಿಳಿಸಿದ್ದು, ಪ್ರಭಾರ ಆರ್ಎಫ್ಒ ವಿನೋದ್ ಗೌಡ ಹಾಗೂ ಇತರ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
‘ಎರಡು ಮರಿಗಳೂ ಆರೋಗ್ಯದಿಂದ ಇವೆ. ಅವುಗಳನ್ನು ತಾಯಿಯ ಜೊತೆ ಸೇರಿಸಬೇಕಾಗಿದೆ. ಸ್ಥಳದಲ್ಲಿ ಕ್ಯಾಮೆರಾ ಟ್ರ್ಯಾಪ್ ಅಳವಡಿಸಿ ಎರಡು ಮೂರು ದಿನ ಚಲನವಲನದ ಮೇಲೆ ನಿಗಾ ಇಡಲಾಗುವುದು.ತಾಯಿ ಚಿರತೆ ಮರಿಗಳಿಗಾಗಿ ವಾಪಸ್ ಬರಬಹುದು. ಸಿಬ್ಬಂದಿ ಸ್ಥಳದಲ್ಲೇ ಇರಲಿದ್ದಾರೆ’ ಎಂದು ಆರ್ಎಫ್ಒ ವಿನೋದ್ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.