ಚಾಮರಾಜನಗರ: ತಾಲ್ಲೂಕಿನ ಬದನಗುಪ್ಪೆ ಬಳಿ ಬುಧವಾರ ಸಂಜೆ ಕಾರು–ಬೈಕ್ ನಡುವೆ ನಡೆದ ಮುಖಾಮುಖಿಯಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೇಡರಪುರ ಗ್ರಾಮದ ಅಶೋಕ (25), ಮಹೇಶ್ (26) ಮೃತಪಟ್ಟವರು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬದನಗುಪ್ಪೆ ಗ್ರಾಮದ ಮಹದೇವಸ್ವಾಮಿ (50) ಎಂಬುವವರಿಗೆ ಕಾರು ಗುದ್ದಿದ್ದರಿಂದ ಗಾಯಗಳಾಗಿದ್ದು, ಯಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಅಶೋಕ್, ಮಹೇಶ್ ಬೈಕ್ನಲ್ಲಿ ಮೈಸೂರು ಕಡೆಯಿಂದ ಬರುತ್ತಿದ್ದರು. ಮಡಿಕೇರಿ ನೋಂದಣಿಯ ಕಾರು (ಹೋಂಡಾ ಸಿಟಿ) ಚಾಮರಾಜನಗರದ ಕಡೆಯಿಂದ ಮೈಸೂರಿನತ್ತ ತೆರಳುತ್ತಿತ್ತು. ಬದನಗುಪ್ಪೆಯಿಂದ ಮುಂದೆ ಕಾರು–ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ’ ಎಂದು ಪಟ್ಟಣ ಠಾಣೆ ಇನ್ಸ್ಪೆಕ್ಟರ್ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಘಟನೆ ನಡೆದ ಸ್ಥಳವನ್ನು ನೋಡಿದಾಗ ಕಾರಿನ ಚಾಲಕನ ತಪ್ಪಿನಂತೆ ಕಾಣುತ್ತಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರ್ರಾಜ್, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.