ಸಂತೇಮರಹಳ್ಳಿ:ಹೋಬಳಿಗೆ ಸೇರಿದ ಉಮ್ಮತ್ತೂರು ಗುಡ್ಡದ ಅರಣ್ಯಕ್ಕೆ ಮಂಗಳವಾರ ಬಿದ್ದ ಬೆಂಕಿಯಿಂದ ಅಪಾರ ಪ್ರಮಾಣದ ಮರ ಗಿಡಗಳು ನಾಶವಾಗಿವೆ. ಮಂಗಳವಾರ ಮಧ್ಯರಾತ್ರಿಯವರೆಗೂ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಬೆಂಕಿಗೆ ಸುಮಾರು 3ರಿಂದ 4 ಕಿಮೀವರೆಗೆ ಅರಣ್ಯ ಪ್ರದೇಶ ಸುಟ್ಟಿದೆ ಎಂದು ಅಂದಾಜಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹುಲ್ಲು, ಕುರುಚಲು ಗಿಡಗಳು ಕರ್ಪೂರ ಹಾಗೂ ನೀಲಗಿರಿ ಮರಗಳು ಬೆಂಕಿಗೆ ಆಹುತಿಯಾಗಿವೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಅಭಿಲಾಷ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಅರಣ್ಯಕ್ಕೆ ಬೆಂಕಿ ಹಾಕುವವರು ಕಂಡು ಬಂದರೆ ಕಾನೂನು ರೀತಿಯಾಗಿ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ರಕ್ಷಕರು ಹೆಚ್ಚಿನ ಗಮನ ಹರಿಸಿ ಬೆಂಕಿ ಬೀಳದಂತೆ ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.
ಬೆಂಕಿಯಿಂದ ಆಗುವ ಅನಾಹುತದ ಬಗ್ಗೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸುವಂತೆಯೂ ಅವರು ಸೂಚಿಸಿದರು.ಉಪ ಅರಣ್ಯ ವಲಯಾಧಿಕಾರಿ ಚಂದ್ರಕುಮಾರ್, ಅರಣ್ಯ ರಕ್ಷಕ ಮಹದೇವಸ್ವಾಮಿ ಇದ್ದರು.