ಚಾಮರಾಜನಗರ: ನಗರದ ಮಾರುಕಟ್ಟೆಯಲ್ಲಿ ಈ ವಾರ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಹೂವುಗಳಿಗೆ ಬೇಡಿಕೆ ಮತ್ತಷ್ಟು ಕುಸಿದಿದೆ. ಹಣ್ಣುಗಳ ಬೆಲೆ ಸ್ಥಿರವಾಗಿದೆ.
ಎರಡು ಮೂರು ವಾರಗಳಿಂದ ಏರಿಳಿತ ಕಂಡು ಬಂದಿದ್ದ ತರಕಾರಿಗಳ ಧಾರಣೆ ಈ ವಾರ ಸ್ಥಿರವಾಗಿದೆ.ಹಾಪ್ಕಾಮ್ಸ್ನಲ್ಲಿ ಟೊಮೆಟೊ, ಕ್ಯಾರೆಟ್, ಬೀನ್ಸ್ ಸೇರಿದಂತೆ ಎಲ್ಲ ತರಕಾರಿಗಳ ಧಾರಣೆ ಕಳೆದವಾರದಷ್ಟೇ ಇದೆ.
ಹಣ್ಣುಗಳ ಪೈಕಿ ಕಿತ್ತಳೆ ಬೆಲೆ ₹10 ಇಳಿದಿದ್ದರೆ, ಪಚ್ಚ ಬಾಳೆಯ ಬೆಲೆ ₹10 ಹೆಚ್ಚಾಗಿದೆ.ಕಳೆದ ವಾರ ಹಾಪ್ಕಾಮ್ಸ್ನಲ್ಲಿ ಕೆಜಿ ಕಿತ್ತಳೆ ₹70ಇತ್ತು. ಈ ವಾರ ₹60ಕ್ಕೆ ಇಳಿದಿದೆ. ಹಲವು ತಿಂಗಳುಗಳಿಂದ ಕೆಜಿಗೆ ₹20 ಇದ್ದ ಪಚ್ಚ ಬಾಳೆ ಬೆಲೆ ಈ ವಾರ ₹30ಕ್ಕೆ ಏರಿದೆ.
ಗಣೇಶ ಹಬ್ಬದ ಬಳಿಕ ಇಳಿಮುಖವಾಗುತ್ತಿರುವ ಹೂವಿನ ಧಾರಣೆ ಈ ವಾರ ಮತ್ತಷ್ಟು ಕಡಿಮೆಯಾಗಿದೆ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಪುಷ್ಪಗಳಿಗೆ ಬೇಡಿಕೆ ಕುಸಿದಿದ್ದು, ಮುಂದಿನ ವಾರದ ಅಂತ್ಯದ ವರೆಗೆ ಇದೇ ಸ್ಥಿತಿ ಮುಂದುವರೆಯಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಸೋಮವಾರ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಚೆಂಡು ಹೂವಿಗೆ ಕೆಜಿಗೆ ₹10, ಸೇವಂತಿಗೆಗೆ ₹20, ಸುಗಂಧರಾಜ ಹೂವಿಗೆ ₹30, ಕಾಕಡಕ್ಕೆ ₹80, ಕನಕಾಂಬರಕ್ಕೆ ₹400 ಇತ್ತು.
‘ಹೂವು ಖರೀದಿ ಪ್ರಮಾಣ ಕುಂಠಿತವಾಗಿದೆ. ಹಾಗಾಗಿ, ಬೆಲೆಯೂ ಇಳಿದಿದೆ. ದಸರಾ ಹಬ್ಬದವರೆಗೆ ಇದೇ ರೀತಿ ಇರಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಮಾಂಸ ಮಾರುಕಟ್ಟೆಯಲ್ಲಿ ಮಟನ್ ಬೆಲೆಯಲ್ಲಿ (₹560) ವ್ಯತ್ಯಾಸವಾಗಿಲ್ಲ. ಚಿಕನ್ ಬೆಲೆ ಕೊಂಚ ಇಳಿದಿದ್ದು, ಕೆಜಿಗೆ ₹180ರಿಂದ ₹200ರವರೆಗೆ ಇದೆ.