ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕರ್ಮರು ಆರ್ಥಿಕವಾಗಿ ಸದೃಢರಾಗಲಿ: ಪುಟ್ಟರಂಗಶೆಟ್ಟಿ

ಜಿಲ್ಲಾಡಳಿತದಿಂದ ವಿಶ್ವಕರ್ಮ ಜಯಂತಿ; ಜಿಲ್ಲಾ ಕೇಂದ್ರದಲ್ಲಿ ಮೆರವಣಿಗೆ
Last Updated 17 ಸೆಪ್ಟೆಂಬರ್ 2022, 16:00 IST
ಅಕ್ಷರ ಗಾತ್ರ

ಚಾಮರಾಜನಗರ: ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ರಚಿಸಿರುವ ನಿಗಮ, ಮಂಡಳಿಗಳಿಂದ ಸೌಲಭ್ಯ, ಸವಲತ್ತು ಪಡೆದು ಸಮಾಜದ ಜನರು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಶನಿವಾರ ಹೇಳಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದೆ ವಿಶ್ವಕರ್ಮರು ಎಲ್ಲ ಉದ್ಯೋಗಗಳನ್ನು ಬಲ್ಲವರಾಗಿದ್ದರು. ಇಡೀ ಮಾನವ ಕುಲಕ್ಕೆ ವಿಶ್ವಕರ್ಮರ ಕಾಯಕ ಅಗತ್ಯವಾಗಿದೆ. ಅವರ ಕುಲಕಸುಬನ್ನು ಉಳಿಸಿಕೊಂಡು ಬಂದಿರುವ ಸಮಾಜಕ್ಕೆ ಕೇವಲ ಜಯಂತಿ ಆಚರಿಸಿದರೆ ಸಾಲದು, ನಿಗಮ ಮಂಡಳಿಗಳಿಂದ ದೊರೆಯುವ ಸೌಲಭ್ಯ, ಸವಲತ್ತುಗಳನ್ನು ಬಳಸಿಕೊಂಡು ವಿಶ್ವಕರ್ಮ ಸಮಾಜವು ಆರ್ಥಿಕವಾಗಿ ಸದೃಢರಾಗಬೇಕು’ ಎಂದರು.

‘ವಿಶ್ವಕರ್ಮ ಸಮಾಜದ ಜನರು ಸಂಘಟಿತರಾಗಿ ರಾಜಕೀಯವಾಗಿ ಅಭಿವೃದ್ಧಿಯಾಗುವುದರ ಜೊತೆಗೆ ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ. ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಒದಗಿಸಿದರೆ ಸರ್ಕಾರವು ನಿಗಮದ ಮೂಲಕ ಇನ್ನಷ್ಟು ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ ಯೋಜನೆ, ಸ್ವ ಸಹಾಯ ಸಂಘಗಳಿಗೆ ಕಿರು ಸಾಲ ಯೋಜನೆ ಮುಂತಾದ ಜನಪರ ಯೋಜನೆಗಳ ಫಲಾನುಭವಿಗಳನ್ನು ಮತ್ತಷ್ಟು ಹೆಚ್ಚಿಸಬಹುದು’ ಎಂದು ಶಾಸಕರು ಹೇಳಿದರು. ‌

ಕಾಡಾ ಅಧ್ಯಕ್ಷ ಬಿ.ನಿಜಗುಣರಾಜು ಮಾತನಾಡಿ, ‘ಆಡು ಮುಟ್ಟದ ಸೊಪ್ಪಿಲ್ಲ, ವಿಶ್ವಕರ್ಮ ಮಾಡದ ಕೆಲಸವಿಲ್ಲ ಎಂಬಂತೆ ವಿಶ್ವಕರ್ಮ ಸಮಾಜದವರು ಚಿನ್ನ, ಕಬ್ಬಿಣ, ಮರಗೆಲಸ ಸೇರಿದಂತೆ ಹಲವು ಕೆಲಸಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ವಿಶ್ವಕರ್ಮರ ಕಸುಬನ್ನು ತಾಂತ್ರಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸಬೇಕಿದೆ’ ಎಂದರು.

ಮೈಸೂರು ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸಿ.ತೇಜೋವತಿ,ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗೂಡೂರು ಭೀಮಸೇನ, ವಿಶ್ವಕರ್ಮ ನಿಗಮದ ಸದಸ್ಯ ಶ್ರೀನಿವಾಸಮೂರ್ತಿ, ಮಧು, ಸಮಿತಿಯ ಅಧ್ಯಕ್ಷರು ಸೋಮಣ್ಣ ಆಚಾರ್, ಮುಖಂಡರಾದ ಅನಂತಕುಮಾರ್ ಇದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದದಲ್ಲಿ ವಿಶ್ವಕರ್ಮರ ಭಾವಚಿತ್ರದ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಪ್ರವಾಸಿ ಮಂದಿರದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT