ಕೊಳ್ಳೇಗಾಲ: ನಗರದ 8ನೇ ವಾರ್ಡ್ನ ಚಿಕ್ಕನಾಯಕರ ಬೀದಿ ಬಡಾವಣೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಾಗಿದೆ.
ಈ ವಾರ್ಡ್ನಲ್ಲಿ ಬಡ ವರ್ಗದವರೇ ಹೆಚ್ಚಿನ ಜನ ಇದ್ದಾರೆ. ನಾಯಕರು, ದೇವಾಂಗ, ಮಡಿವಾಳ ಸಮಾಜದವರು ಇದ್ದಾರೆ. 600ಕ್ಕೂ ಹೆಚ್ಚು ಕುಟುಂಬಗಳು 1500 ಜನ ಸಂಖ್ಯೆ ಇದ್ದಾರೆ. ಇಲ್ಲಿ ರಸ್ತೆ ತಕ್ಕ ಮಟ್ಟಿಗೆ ಚೆನ್ನಾಗಿದೆ. ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿದೆ.
ಚರಂಡಿ, ಕಸದ ಸಮಸ್ಯೆ, ವಿದ್ಯುತ್ ಸಮಸ್ಯೆ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ.
ಕಸದ ರಾಶಿ: ವಾರ್ಡ್ನ ಪ್ರತಿಯೊಂದು ತಿರುವಿನ ಅಡ್ಡರಸ್ತೆಯಲ್ಲೂ ಕಸದ ರಾಶಿ ಬಿದ್ದಿರುತ್ತವೆ. ನಗರಸಭೆಯವರು ಸಮರ್ಪಕವಾಗಿ ಕಸ ತೆರವು ಮಾಡುವುದಿಲ್ಲ. ವಾರ್ಡ್ ಅನ್ನು ಸ್ವಚ್ಚ ಮಾಡುವುದಿಲ್ಲ. ಮಾಡಿದರೂ ಕಾಟಾಚಾರಕ್ಕೆ ಮಾಡುತ್ತಾರೆ. ಜೋರು ಗಾಳಿಯ ರಭಸಕ್ಕೆ ಕಸ ತೂರಿಕೊಂಡು ಹೋಗುತ್ತವೆ ಎಂಬುದು ನಿವಾಸಿಗಳ ದೂರು.
‘ಚರಂಡಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಎಲ್ಲ ಚರಂಡಿಗಳು ಗಬ್ಬು ನಾರುತ್ತಿವೆ. ಸ್ಥಳೀಯರು ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ. ಚರಂಡಿ ಸ್ವಚ್ಛ ಮಾಡಿ ಕಸ, ಹೂಳನ್ನು ಮೇಲೆ ಹಾಕಿದರೂ, ಅದನ್ನು ತೆರವುಗೊಳಿಸುವುದಿಲ್ಲ. ಹಾಗಾಗಿ ಮತ್ತೆ ಚರಂಡಿಗೆ ಕಸ ಬೀಳುತ್ತದೆ. ಬೀದಿ ದೀಪಗಳು ಕೆಟ್ಟು ನಿಂತಿದೆ. ಸರಿಪಡಿಸಲು ಯಾರೂ ಗಮನಹರಿಸಿಲ್ಲ’ ಎಂದು ವಾರ್ಡ್ ನಿವಾಸಿ ಚಿಕ್ಕತಾಯಮ್ಮ ಹೇಳಿದರು.
ಖಾತೆಗಳು ಆಗುತ್ತಿಲ್ಲ: ಜನರ ಅಳಲು
ವಾರ್ಡ್ನಲ್ಲಿ ಹಲವು ವರ್ಷಗಳಿಂದ ನೆಲೆಸಿರುವವರಿಗೆ ನಿವೇಶನಗಳ ಖಾತೆ ಮಾಡಿಸಿಕೊಳ್ಳಲು ಆಗುತ್ತಿಲ್ಲ.
ಈ ವಾರ್ಡ್ನಲ್ಲಿ ಹಲವು ದಶಗಳಷ್ಟು ಹಳೆಯದಾದ ಚಿಕ್ಕ ಚಿಕ್ಕ ಮನೆಗಳು ಇವೆ. ಹಲವು ಮನೆಗಳು ಕುಸಿಯುವ ಹಂತದಲ್ಲಿವೆ. ಕೆಲವು ಮನೆಗಳು ನೆಲಸಮವಾಗಿವೆ. ನಿವೇಶನಗಳಿಗೆ ಸರಿಯಾದ ದಾಖಲೆಗಳು ಇಲ್ಲದ ಕಾರಣ ಖಾತೆಗಳು ಆಗುತ್ತಿಲ್ಲ.
‘ಕೆಲವು ಮನೆಗಳಿಗೆ ದಾಖಲೆ ಇದ್ದರೂ ಖಾತೆ ಮಾಡಿಕೊಡುತ್ತಿಲ್ಲ. ಮನೆಗಳಿಗೆ ಗೃಹಸಾಲ ನೀಡಲು ಬ್ಯಾಂಕ್, ಸೇರಿದಂತೆ ಅನೇಕ ಫೈನಾನ್ಸ್ ಕಂಪನಿಗಳು ಮುಂದೆ ಬರುತ್ತಿದ್ದಾರೆ. ಆದರೆ ನಗರಸಭೆಯವರು ಖಾತೆ ನೀಡುತ್ತಿಲ್ಲ, ಸರ್ಕಾರದ ಗೃಹ ಭಾಗ್ಯ ಯೋಜನೆಗಳು ಬಂದರೂ ಹಿಂದೆ ಹೋಗುತ್ತಿದೆ. ಹೀಗಾದರೆ ನಾವು ಮನೆ ಹೇಗೆ ಕಟ್ಟುವುದು’ ಎಂದು ನಿವಾಸಿ ಮಹದೇವನಾಯಕ ಪ್ರಶ್ನಿಸಿದರು.
--
ವಾರ್ಡ್ ಅಭಿವೃದ್ದಿಗೆ ಆದ್ಯತೆ ನೀಡುತ್ತಿದ್ದು, ಸಮಸ್ಯೆಗಳು ಕಂಡು ಬಂದರೆ ತಕ್ಷಣವೇ ಪರಿಹರಿಸುವ ಕೆಲಸ ಮಾಡುತ್ತಿದ್ದೇನೆ.
ಕವಿತಾ, ವಾರ್ಡ್ ಸದಸ್ಯೆ
--
ಖಾತೆ ಸಮಸ್ಯೆ ಬಗೆಹರಿಸುವ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು. ಸದ್ಯದಲ್ಲೇ ಖಾತಾ ಆಂದೋಲನ ಹಮ್ಮಿಕೊಳ್ಳಲಾಗುವುದು
ರೇಖಾ, ನಗರಸಭೆ ಅಧ್ಯಕ್ಷೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.