ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಸ್.ಪುಟ್ಟರಾಜುಗೆ ಜಿಲ್ಲೆಯ ನಾಯಕತ್ವ

ರೈತ ಚೈತನ್ಯ ಸಮಾವೇಶದಲ್ಲಿ ಎಚ್‌.ಡಿ.ದೇವೇಗೌಡ ಹೇಳಿಕೆ
Last Updated 2 ಏಪ್ರಿಲ್ 2018, 13:03 IST
ಅಕ್ಷರ ಗಾತ್ರ

ಪಾಂಡವಪುರ: ‘ಎಚ್.ಡಿ.ಕುಮಾರಸ್ವಾಮಿ ನಂಬಿದ್ದ ಚಲುವರಾಯಸ್ವಾಮಿ ಪಕ್ಷಕ್ಕೆ ದ್ರೋಹ ಮಾಡಿರುವುದರಿಂದ ಜಿಲ್ಲೆಯಲ್ಲಿ ಜೆಡಿಎಸ್ ನಾಯಕತ್ವವನ್ನು ಸಿ.ಎಸ್.ಪುಟ್ಟರಾಜು ಅವರಿಗೆ ವಹಿಸಬೇಕಾಗಿದೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.ಪಟ್ಟಣದ ಪಾಂಡವ ಕ್ರೀಡಾಂಗಣದ ಬಳಿ ಭಾನುವಾರ ಜೆಡಿಎಸ್ ಆಯೋಜಿಸಿದ್ದ ರೈತ ಚೈತನ್ಯ ಸಮಾವೇಶದಲ್ಲಿ ಅವರು ಮಾತನಾಡಿದರು.ಚಲುವರಾಯಸ್ವಾಮಿ ಮೇಲೆ ಕುಮಾರಸ್ವಾಮಿ ನಂಬಿಕೆ ಇರಿಸಿ ಜಿಲ್ಲೆಯ ನಾಯಕತ್ವ ವಹಿಸಿದ್ದರು. ಆದರೆ ಅವರು ಅದಕ್ಕೆ ಪೂರಕವಾಗಿರಲಿಲ್ಲ. ಈ ಕಾರಣದಿಂದ ಪುಟ್ಟರಾಜು ಅವರಿಗೆ ಜಿಲ್ಲೆಯ ನಾಯಕತ್ವ ವಹಿಸುವುದು ಅನಿವಾರ್ಯವಾಗಿದೆ. ಸಂಸದರಾಗಿ ಅವರ ಅವಧಿ 18 ತಿಂಗಳು ಇದೆ. ಆದರೂ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಅವರನ್ನು ಕಣಕ್ಕೆ ಇಳಿಸಲಾಗುತ್ತಿದೆ ಎಂದರು.

ಮುಖಂಡ ಪಿ.ಜಿ.ಆರ್.ಸಿಂಧ್ಯ ಮಾತನಾಡಿ, 'ಎಚ್.ಡಿ.ದೇವೇಗೌಡ ಅವರು ದೇಶದ ಮುತ್ಸದ್ಧಿ ರಾಜಕಾರಣಿ. ದೇವೇಗೌಡ ಅವರು ಕೇವಲ ತಮ್ಮ ಮಕ್ಕಳಿಗೆ ಅಧಿಕಾರ ಕೊಡಿಸಲು ಹೋರಾಡುತ್ತಿಲ್ಲ. ಅವರೊಂದಿಗೆ ನಾನು 30 ವರ್ಷಗಳಿಂದಲೂ ಇದ್ದೇನೆ. ನಾಡಿನ ರೈತರು, ನೀರಾವರಿಗಾಗಿ ಅವರು ನಡೆಸಿದ ಹೋರಾಟ ಅವಿಸ್ಮರಣೀಯ. ಅವರೊಬ್ಬ ನೀರಾವರಿ ತಜ್ಞ' ಎಂದು ಹೇಳಿದರು. ದೇವೇಗೌಡ ಅವರು ಇಲ್ಲದಿದ್ದರೆ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಆದರೆ, ಅದನ್ನು ಸಿದ್ದರಾಮಯ್ಯ ಅರ್ಥಮಾಡಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂಸದ ಸಿ.ಎಸ್‌.ಪುಟ್ಟರಾಜು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆರೆ ತುಂಬಿಸುವ ಯೋಜನೆಯನ್ನು ಜಾರಿಗೊಳಿಸಿದ್ದೇವೆ ಎಂದು ಬೂಟಾಟಿಕೆ ಯ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎನ್.ಮಹೇಶ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್‌ಖಾನ್, ಲಕ್ಷ್ಮಿಅಶ್ವಿನಿಗೌಡ ಮಾತನಾಡಿದರು.

ಶಾಸಕರಾದ ಕೆ.ಸಿ.ನಾರಾಯಣಗೌಡ, ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕರಾದ ಜಿ.ಬಿ.ಶಿವ ಕುಮಾರ್, ಎಂ.ಶ್ರೀನಿವಾಸ್, ಪ್ರಭಾವತಿ ಜಯರಾಮ್, ನಾಗರತ್ನಸ್ವಾಮಿ, ಮುಖಂಡರಾದ ಡಾ.ಕೃಷ್ಣ, ತಗ್ಗಹಳ್ಳಿ ವೆಂಕಟೇಶ್, ಕೀಲಾರ ರಾಧಾಕೃಷ್ಣ, ಸಂತೋಷ್, ಸಿ.ಅಣ್ಣೇಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ ಇದ್ದರು.

ಕಣ್ಣೀರು ಹಾಕಿದ ಪುಟ್ಟರಾಜು

ಪಾಂಡವಪುರ: ‘ಇಸ್ರೇಲ್‌ ಪ್ರವಾಸದ ಸಂದರ್ಭದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಅಪಾರ ಯಾತನೆ ಅನುಭವಿಸಿದರು. ಆರೋಗ್ಯ ಸಮಸ್ಯೆಯಿಂದ ಅವರು ಅಪಾರ ನೋವು ಅನುಭವಿಸಬೇಕಾಯಿತು’ ಎಂದು ಸಂಸದ ಸಿ.ಎಸ್‌.ಪುಟ್ಟರಾಜು ಕಣ್ಣೀರು ಹಾಕಿದರು.‘ನಾವೆಲ್ಲರೂ ಕುಮಾರಸ್ವಾಮಿ ಅವರ ಜೊತೆಯಲ್ಲೇ ಇದ್ದೆವು. ಆ ಸಂದರ್ಭದಲ್ಲಿ ಅವರಿಗೆ ತೊಂದರೆಯಾಗಿದ್ದರೆ ಇಂದು ನಿಮಗೆ ಮುಖ ತೋರಿಸಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೆಲ್ಲಾ ನೋವು ಅನುಭವಿಸಿದರೂ ಅವರು ನಮಗೆ ಹೇಳಿಕೊಂಡಿರಲಿಲ್ಲ. ವಿಮಾನ ಪ್ರಯಾಣದ ವೇಳೆ ಅವರಿಗೆ ಹೃದಯ ಸಮಸ್ಯೆಯಾಗಿತ್ತು. ಆದರೂ ಅವರು ನೋವು ನುಂಗಿ ಪ್ರವಾಸ ಮಾಡಿದರು’ ಎಂದು ಹೇಳುತ್ತಾ ಭಾವುಕರಾದರು.

ನೀರು ಒದಗಿಸಿ, ಸಾಲಮನ್ನಾ ಮಾಡಿ

ಪಾಂಡವಪುರ: ರೈತರಿಗೆ ಸಮರ್ಪಕವಾಗಿ ನೀರುಕೊಟ್ಟರೆ ಅವರೇ ನಿಮಗೆ ಬೆಳೆದುಕೊಡುತ್ತಾರೆ. ರೈತರಿಗೆ ಬೇಕಿರುವುದು ನೀರು, ಸಾಲಮನ್ನಾ ಎಂದು ಎಚ್.ಡಿ.ದೇವೇಗೌಡ ಹೇಳಿದರು.ರಾಜ್ಯದ ನೀರಾವರಿಗೆ ಸಿದ್ದರಾಮಯ್ಯನವರ ಕೊಡುಗೆ ಏನೂ ಇಲ್ಲ. ಕಾವೇರಿಯಿಂದ ನಮಗೆ ಇನ್ನೂ 40ಟಿಎಂಸಿ ಅಡಿ ನೀರು ದೊರಕಬೇಕಿದೆ. ಅದಕ್ಕಾಗಿ ಹೋರಾಡಲು ಸಿದ್ಧ ಎಂದರು.‘ಕಾವೇರಿ ನೀರಿನ ನಿರ್ವಹಣಾ ಮಂಡಳಿ ವಿಚಾರವಾಗಿ ಚರ್ಚಿಸಲು ಕೇಂದ್ರ ಸಚಿವ ನಿತಿನ್‌ ಗಡ್ಗರಿ ಅವರನ್ನು ಭೇಟಿ ಮಾಡಿದ್ದೆ. ಈ ಸಂಬಂಧ ಕಾಂಗ್ರೆಸ್ ನಾಯಕರು ನನ್ನ ಮೇಲೆ ಅನುಮಾನಪಟ್ಟು ಬಿಜೆಪಿ ಜತೆ ಎಂದು ಬಿಂಬಿಸಿದರು. ಇದಕ್ಕೆ ನಾನು ತಲೆಕೆಡಿಸಿಕೊಳ್ಳಲಿಲ್ಲ. ಹೋರಾಡಿದೆ’ ಎಂದು ತಿಳಿಸಿದರು.‘ಅಲ್ಪಸಂಖ್ಯಾತರ ಮತಕ್ಕಾಗಿ ರಾಹುಲ್ ಗಾಂಧಿ ನಮ್ಮ ಪಕ್ಷವನ್ನು ಸಂಘಪರಿವಾರಕ್ಕೆ ಹೋಲಿಸಿದರು. ಸಿದ್ದರಾಮಯ್ಯನವರು ಲಿಂಗಾಯಿತ-ವೀರಶೈವ ಧರ್ಮವೆಂದು ಪ್ರತ್ಯೇಕಿಸಿ ಸಮಾಜವನ್ನು ಒಡೆದುಹಾಕಿದರು’ ಎಂದು ಕಿಡಿಕಾರಿದರು.

ತೆರೆದ ವಾಹನದಲ್ಲಿ ಮೆರವಣಿಗೆ

ಪಾಂಡವಪುರ: ರೈತ ಚೈತನ್ಯ ಸಮಾವೇಶಕ್ಕೂ ಮುನ್ನ ಎಚ್.ಡಿ.ದೇವೇಗೌಡ ಅವರನ್ನು ತೆರೆದ ವಾಹನದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.ದೇವೇಗೌಡ ಅವರಿಗೆ ಕ್ರೇನ್ ಮೂಲಕ ಹೂಬುಟ್ಟಿಯಲ್ಲಿ ಪುಷ್ಪಾರ್ಚನೆ ಮಾಡಲಾಯಿತು. ರಸ್ತೆಯುದ್ದಕ್ಕೂ ಜೆಡಿಎಸ್ ಕಾರ್ಯಕರ್ತರು ದೇವೇಗೌಡರಿಗೆ ಘೋಷಣೆ ಕೂಗಿ ಪುಷ್ಪಾರ್ಚನೆ ಮಾಡಿದರು. ಸುಮಾರು 2 ಗಂಟೆ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT